
ಕಾಂಗ್ರೆಸ್ ಹಿರಿಯ ಶಾಸಕ ರಾಜು ಕಾಗೆ
ಸಿಎಂ, ಮಂತ್ರಿಗಳ ಮೇಲೆ ಆರೋಪ ಮಾಡಿಲ್ಲ; ವ್ಯವಸ್ಥೆಯ ಬಗ್ಗೆ ಮಾತ್ರ ಅಸಮಾಧಾನ- ಶಾಸಕ ರಾಜು ಕಾಗೆ
ನನ್ನ ಕ್ಷೇತ್ರದಲ್ಲಿ ಸಮುದಾಯ ಭವನ, ಸಿಸಿ ರಸ್ತೆ, ಶಾಲಾ ಕೊಠಡಿಗಳು ಮಾಡಲು ಅವಕಾಶ ಸಿಗುತ್ತಿಲ್ಲ. ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಸ್ಪಂದನೆ ನೀಡುತ್ತಿಲ್ಲ.ಇದು ನನ್ನ ಅಸಮಾಧಾನಕ್ಕೆ ಕಾರಣ ಎಂದು ಶಾಸಕ ರಾಜುಕಾಗೆ ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರ ಮೇಲೆ ಆರೋಪ ಮಾಡಿಲ್ಲ. ವ್ಯವಸ್ಥೆ ಬಗ್ಗೆ ವೈಯಕ್ತಿಕವಾಗಿ ಅಸಮಾಧಾನವಿದೆ. ನಾನು ಮಾಡಿದ ಆರೋಪಗಳಿಗೆ ಈಗಲೂ ಬದ್ದ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಅಧ್ಯಕ್ಷ ಹಾಗೂ ಶಾಸಕ ರಾಜು ಕಾಗೆ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಕ್ಷೇತ್ರದಲ್ಲಿ ಸಮುದಾಯದ ಭವನ, ಸಿಸಿ ರಸ್ತೆ, ಶಾಲಾ ಕೊಠಡಿಗಳು ಮಾಡಲು ಅವಕಾಶ ಸಿಗುತ್ತಿಲ್ಲ. ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಸ್ಪಂದನೆ ನೀಡುತ್ತಿಲ್ಲ. ಇದು ನನ್ನ ಅಸಮಾಧಾನಕ್ಕೆ ಕಾರಣ ಎಂದರು.
ಸಿಎಂ ಕರೆದರೆ ಮಾತನಾಡುವೆ
ಮುಖ್ಯಮಂತ್ರಿ ಹಾಗೂ ಸಚಿವರು ವಾರದಲ್ಲಿ ಒಂದು ದಿನವಾದರೂ ಶಾಸಕರಿಗೆ ಸಿಗಬೇಕು. ಆದರೆ, ನಮಗೆ ಸಚಿವರು ಸಿಗುತ್ತಿಲ್ಲ. ಶಾಸಕಾಂಗ ಸಭೆಯಲ್ಲಿ ನನ್ನ ನೋವು ಹೇಳಿಕೊಂಡರೂ ಇದೂವರೆಗೂ ಸಿಎಂ, ಮಂತ್ರಿಗಳು ಸಮಸ್ಯೆ ಏನು ಎಂದು ಕೇಳಿಲ್ಲ. ಅನುದಾನ ನೀಡಿಲ್ಲ. ಈಗ ಮುಖ್ಯಮಂತ್ರಿ ಕರೆದರೆ ಹೋಗಿ ಮಾತನಾಡುತ್ತೇನೆ ಎಂದು ಹೇಳಿದರು.
ಹಕ್ಕುಚ್ಯುತಿ ಕೊಟ್ಟರೂ ಕ್ರಮವಿಲ್ಲ
ನಾನು 30 ವರ್ಷಗಳಿಂದ ಶಾಸಕನಾಗಿದ್ದೇನೆ. ಐಎಎಸ್ ಅಧಿಕಾರಿ ರಾಜೇಂದ್ರ ಕಠಾರಿಯ ನನಗೆ ಅವಮಾನ ಮಾಡಿದ್ದಾರೆ. ಅವರ ಮೇಲೆ ದೂರು ಕೊಟ್ಟರೂ ಕ್ರಮ ಕೈಗೊಂಡಿಲ್ಲ. ಶಾಸಕರಿಗಿಂತ ಅಧಿಕಾರಿಯೇ ಇವರಿಗೆ ಹೆಚ್ಚಾಗಿದೆ. ಹಕ್ಕುಚ್ಯುತಿ ಕೊಟ್ಟರೂ ಇದುವರೆಗೂ ಯಾವುದೇ ಕ್ರಮ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಅನುದಾನ ಬಳಕೆಯಾಗುತ್ತಿಲ್ಲ
ಆದಷ್ಟು ಶೀಘ್ರ ಕಡತಗಳನ್ನು ಪೂರ್ಣಗೊಳಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ಕೊಡಬೇಕು. ಆಡಳಿತ ಚುಕ್ಕಾಣಿ ಸರಿಯಾಗಿ ಆಗಬೇಕು. ಶಾಸಕರು ಹಾಗೂ ಸಾರ್ವಜನಿಕರ ಕೆಲಸಗಳು ಆಗಬೇಕು. ಸರ್ಕಾರ ಅನುದಾನ ನೀಡಿದೆ ಆದರೆ ಸರಿಯಾಗಿ ಬಳಕೆಯಾಗುತ್ತಿಲ್ಲ. ಬಸವೇಶ್ವರ ನೀರಾವರಿ ಯೋಜನೆ ಬಗ್ಗೆ ಸಿಎಂ, ಡಿಸಿಎಂ ಅವರ ಬಳಿ ಹಲವು ಬಾರಿ ತಿಳಿಸಿದರೂ ಪ್ರಯೋಜನವಾಗಿಲ್ಲ ಎಂದರು.
ಸಚಿವರು ನಮ್ಮ ಪತ್ರಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಯಾವ ಪುರುಷಾರ್ಥಕ್ಕಾಗಿ ನಾವು ಶಾಸಕರಾಗಿರಬೇಕು. ಪ್ರತಿಪಕ್ಷಗಳು ನಮ್ಮ ಹೇಳಿಕೆಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಈಗಲಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕರೆದು ಮಾತನಾಡಬಹುದು ಎಂದು ಅಸಹಾಯಕತೆ ವ್ಯಕ್ತಪಡಿಸಿದರು.