ಹಣೆಬರಹವಿದ್ದರೆ ಮಾತ್ರ ಅಣ್ಣ ಸಿಎಂ: ನಾಯಕತ್ವ ಬದಲಾವಣೆ ಕುರಿತು ಡಿ.ಕೆ. ಸುರೇಶ್ ಮಾರ್ಮಿಕ ನುಡಿ
x

"ಹಣೆಬರಹವಿದ್ದರೆ ಮಾತ್ರ ಅಣ್ಣ ಸಿಎಂ": ನಾಯಕತ್ವ ಬದಲಾವಣೆ ಕುರಿತು ಡಿ.ಕೆ. ಸುರೇಶ್ ಮಾರ್ಮಿಕ ನುಡಿ

"ಶಾಸಕರು ದೆಹಲಿಗೆ ಹೋಗುವ ಬಗ್ಗೆ ನನಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಇದು ಅವರ ವೈಯಕ್ತಿಕ ವಿಚಾರ" ಎಂದು ಬಮೂಲ್‌ ಅಧ್ಯಕ್ಷ ಡಿ.ಕೆ. ಸುರೇಶ್‌ ಹೇಳಿದ್ದಾರೆ.


Click the Play button to hear this message in audio format

ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ಚರ್ಚೆಗಳು ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಸಹೋದರ ಹಾಗೂ ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಅವರು ಶನಿವಾರ ಮಹತ್ವದ ಹೇಳಿಕೆ ನೀಡಿದ್ದಾರೆ.

"ಹಣೆಬರಹದಲ್ಲಿದ್ದರೆ ಮಾತ್ರ ನನ್ನ ಅಣ್ಣ ಮುಖ್ಯಮಂತ್ರಿಯಾಗುತ್ತಾರೆ, ವಿಧಿ ಬರಹವಿಲ್ಲದಿದ್ದರೆ ಯಾರೂ ಏನೂ ಮಾಡಲು ಸಾಧ್ಯವಿಲ್ಲ" ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ.

ರಾಜಕೀಯ ಸಂಘರ್ಷದ ಹಾದಿಯಲ್ಲಿ ನೀವು ಶಸ್ತ್ರತ್ಯಾಗ ಮಾಡಿದ್ದೀರಾ? ಎಂಬ ಮಾಧ್ಯಮಗಳ ಪ್ರಶ್ನೆಗೆ ತಮ್ಮದೇ ಶೈಲಿಯಲ್ಲಿ ಉತ್ತರಿಸಿದ ಸುರೇಶ್, "ತ್ಯಾಗ ಮಾಡಲು ಮೊದಲು ಕೈಯಲ್ಲಿ ಶಸ್ತ್ರವಿರಬೇಕಲ್ಲವೇ?, ಶಸ್ತ್ರವೇ ಇಲ್ಲ ಎಂದ ಮೇಲೆ ಶಸ್ತ್ರತ್ಯಾಗದ ಪ್ರಶ್ನೆ ಎಲ್ಲಿಂದ ಬರುತ್ತದೆ?, ನಾನು ಯಾವಾಗಲೂ ತಾಳ್ಮೆಯೇ ದೊಡ್ಡ ಅಸ್ತ್ರ ಎಂದು ನಂಬಿದವನು. ಈಗಲೂ ಅದನ್ನೇ ಹೇಳುತ್ತಿದ್ದೇನೆ, ಎಲ್ಲದಕ್ಕೂ ತಾಳ್ಮೆ ಇರಲಿ," ಎಂದರು. ರಾಜಕಾರಣಕ್ಕೆ ಯುದ್ಧದ ಶಸ್ತ್ರಗಳ ಅಗತ್ಯವಿಲ್ಲ ಎಂದು ಮಾರ್ಮಿಕವಾಗಿ ನುಡಿದರು.

ಶಾಸಕರ ದೆಹಲಿ ಯಾತ್ರೆ ಬಗ್ಗೆ ಮೌನ

ನಾಯಕತ್ವ ಬದಲಾವಣೆ ಕೋರಿ ಶಾಸಕರು ದೆಹಲಿಗೆ ತೆರಳುತ್ತಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಶಾಸಕರು ದೆಹಲಿಗೆ ಹೋಗುವ ಬಗ್ಗೆ ನನಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಭೋಜನಕೂಟದಲ್ಲಿ ಅವರು ಏನು ಚರ್ಚಿಸಿದ್ದಾರೆ ಎಂಬುದು ಅವರಿಗೆ ತಿಳಿದಿರಬೇಕು. ಇದು ಅವರ ವೈಯಕ್ತಿಕ ವಿಚಾರವಾಗಿದ್ದು, ಪಕ್ಷದ ಹೈಕಮಾಂಡ್ ಇದನ್ನು ಗಮನಿಸಲಿದೆ." 2028ರ ಚುನಾವಣೆ ಕಷ್ಟವಾಗಲಿದೆಯೇ ಎಂಬ ಪ್ರಶ್ನೆಗೆ, "ಚುನಾವಣೆಗೆ ನಿಲ್ಲುವವರಿಗೆ ಕಷ್ಟವಾಗಬಹುದು, ನನಗಲ್ಲ," ಎಂದರು.

ದಲಿತ ಸಿಎಂ ಆಸೆ ತಪ್ಪಲ್ಲ

ಸಿದ್ದರಾಮಯ್ಯ ಅವರ ಬದಲಿಗೆ ದಲಿತ ಸಿಎಂ ಮಾಡಬೇಕು ಎಂಬ ಸಚಿವ ಎಚ್.ಸಿ. ಮಹದೇವಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸುರೇಶ್, "ರಾಜಕಾರಣದಲ್ಲಿ ಎಲ್ಲರಿಗೂ ಆಸೆ ಇರುವುದು ಸಹಜ, ಅದರಲ್ಲಿ ಯಾವುದೇ ತಪ್ಪಿಲ್ಲ," ಎಂದರು. ತಮ್ಮ ಅಣ್ಣನನ್ನು ಸಿಎಂ ಮಾಡಲು ಶಾಸಕರ ಬೆಂಬಲ ಕ್ರೋಢೀಕರಿಸುತ್ತಿದ್ದೀರಾ ಎಂಬ ಪ್ರಶ್ನೆಗೆ, "ಅದೆಲ್ಲಾ ನನಗೆ ಗೊತ್ತಿಲ್ಲ, ಬಮೂಲ್ ಬಗ್ಗೆ ಏನಾದರೂ ಇದ್ದರೆ ಕೇಳಿ," ಎಂದು ವಿಷಯಾಂತರ ಮಾಡಿದರು.

ಕೊಟ್ಟ ಮಾತು ಉಳಿಸಿಕೊಳ್ಳಬೇಕು

ಗ್ಯಾರಂಟಿ ಯೋಜನೆಗಳು ಸರ್ಕಾರದ ಮೇಲೆ ಹೊರೆಯಾಗುತ್ತಿವೆ ಎಂಬ ಚರ್ಚೆಯ ಬಗ್ಗೆ ಡಿ.ಕೆ. ಸುರೇಶ್ ಉತ್ತರಿಸಿದ ಅವರು, "ಗ್ಯಾರಂಟಿಗಳು ನಾವು ಜನತೆಗೆ ಕೊಟ್ಟ ವಾಗ್ದಾನ. ಹೊರೆಯಾದರೂ ಸರಿ, ಬೇರೆಯಾದರೂ ಸರಿ, ಮಾತು ಕೊಟ್ಟ ಮೇಲೆ ಅದನ್ನು ಉಳಿಸಿಕೊಳ್ಳುವುದು ನಮ್ಮ ಧರ್ಮ." "ಐದು ವರ್ಷಗಳ ಕಾಲ ಎಷ್ಟೇ ಕಷ್ಟ ಬಂದರೂ ಗ್ಯಾರಂಟಿಗಳನ್ನು ನೀಡಲೇಬೇಕು. ಹಿಂದೆ ಸರಿದರೆ ಅದು ಜನತೆಗೆ ಮಾಡಿದ ದ್ರೋಹವಾಗುತ್ತದೆ." "ಬಡವರಿಗಾಗಿ ತಂದ ಯೋಜನೆಯನ್ನು ಶ್ರೀಮಂತರು ಬಳಸುತ್ತಿದ್ದರೆ ಅದು ತಪ್ಪು. ಆದರೆ ಕೊಟ್ಟ ಮಾತಿನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ," ಎಂದು ಸ್ಪಷ್ಟಪಡಿಸಿದರು.

ಕೆಎಂಎಫ್ ಚುನಾವಣೆ

ಮಾರ್ಚ್ 6ರ ಕೆಎಂಎಫ್ ಚುನಾವಣೆ ಬಗ್ಗೆ ಮಾತನಾಡಿದ ಅವರು, ಅಧಿಕಾರಿಗಳು ನಿಗದಿಪಡಿಸಿದ ಸಮಯದಲ್ಲಿ ಚುನಾವಣೆ ನಡೆಯಲಿದೆ ಮತ್ತು ಪಕ್ಷ ಸೂಚಿಸಿದ ಅಭ್ಯರ್ಥಿಯೇ ಕಣಕ್ಕಿಳಿಯಲಿದ್ದಾರೆ ಎಂದರು. ಅಲ್ಲದೆ, ತಾವು ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕಾಗಲಿ ಅಥವಾ ರಾಜ್ಯಸಭೆಗಾಗಲಿ ಆಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದರು.

Read More
Next Story