
ಸಿಎಂ ಸಿದ್ದರಾಮಯ್ಯ ಹಾಗೂ ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ
ಬಾಗಲಕೋಟೆ ಉಪಸಮರ| ಸೋಲಿನ ಭೀತಿಯಿಂದ ಹಳ್ಳಿಗಳಲ್ಲಿ ಹಣ ಹಂಚಿಕೆ; ಬಿಜೆಪಿ ಗಂಭೀರ ಆರೋಪ
ಕಾಂಗ್ರೆಸ್ ಪಕ್ಷಕ್ಕೆ ಕಾರ್ಯಕರ್ತರೇ ಇಲ್ಲ. ಪ್ರಚಾರಕ್ಕೆ ಸರ್ಕಾರಿ ನೌಕರರು ಹಾಗೂ ಶಿಕ್ಷಕರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.
ಬಾಗಲಕೋಟೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸೋಲುವ ಭೀತಿಯಿಂದ ಹಳ್ಳಿ-ಹಳ್ಳಿಗಳಲ್ಲಿ ಹಣ ಹಂಚುತ್ತಿದ್ದಾರೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ ಮಾಡಿದರು.
ಬಾಗಲಕೋಟೆ ಗ್ರಾಮಾಂತರದಲ್ಲಿ ಬಿಜೆಪಿ ಸೋಲು ಖಚಿತವೆಂದು ಗೊತ್ತಾದ ನಂತರ ಸಿಎಂ ಸಿದ್ದರಾಮಯ್ಯ ಅವರು ಐದು ದಿನ ಕ್ಷೇತ್ರದಲ್ಲೇ ಠಿಕಾಣಿ ಹೂಡಿದ್ದಾರೆ. ಹಳ್ಳಿಗಳಿಗೆ ಭೇಟಿ ನೀಡುವ ಮೊದಲು ಒಂದೊಂದು ಹಳ್ಳಿಗೆ 5 ರಿಂದ 10 ಲಕ್ಷ ರೂ. ಹಣ ಹಂಚಿಕೆ ಮಾಡುತ್ತಿದ್ದಾರೆ ಎಂದು ದೂರಿದರು.
ಶುಕ್ರವಾರ (ಏ.3) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಲವೆಡೆ ರಸ್ತೆ ಗುಂಡಿಗಳನ್ನು ಮಣ್ಣಿನಿಂದ ಮುಚ್ಚಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಕಾರ್ಯಕರ್ತರೇ ಸಿಗುತ್ತಿಲ್ಲ. ಬದಲಿಗೆ ಸರ್ಕಾರಿ ನೌಕರರು, ಶಿಕ್ಷಕರನ್ನು ಬಳಸಿಕೊಳ್ಳಲಾಗುತ್ತಿದೆ. ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರನ್ನು ಗೆಲ್ಲಿಸಲು ಮತದಾರರು ತೀರ್ಮಾನ ಮಾಡಿದ್ದಾರೆ. ಅಲ್ಪಸಂಖ್ಯಾತರೂ ಬಿಜೆಪಿ ಬೆಂಬಲಕ್ಕೆ ನಿಂತಿರುವುದು ನಮ್ಮ ವಿಶ್ವಾಸ ಹೆಚ್ಚಿಸಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಕಾರ್ಯಕರ್ತರಿಂದಲೇ ಬಿಜೆಪಿಗೆ ಮತ
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅವರನ್ನು ಕಾಂಗ್ರೆಸ್ ನಾಯಕರು ತಪ್ಪು ದಾರಿಗೆ ಎಳೆದಿರುವ ಭಾವನೆ ಸಮುದಾಯದಲ್ಲಿದೆ. ಹಾಗಾಗಿ, ಕಾಂಗ್ರೆಸ್ಗೆ ಮತ ಹಾಕದಿರಲು ಮುಸ್ಲಿಮರು ತೀರ್ಮಾನಿಸಿದ್ದಾರೆ. ಕಣದಲ್ಲಿ ಎಸ್ಡಿಪಿಐ ಅಭ್ಯರ್ಥಿ ಅಫ್ಸರ್ ಕೂಡ್ಲಿಪೇಟೆಯೂ ಇದ್ದಾರೆ. ಕಾಂಗ್ರೆಸ್ ಯುವ ಮುಖಂಡ ಮೊಹಮ್ಮದ್ ನಲಪಾಡ್ ಅವರು ಮುಸಲ್ಮಾನರನ್ನೇ ಬೈದಿದ್ದಾರೆ. ಇದರಿಂದ ಸಮುದಾಯಕ್ಕೆ ಇನ್ನಷ್ಟು ಕೋಪ ಬಂದಿದೆ. ಇವೆಲ್ಲವೂ ಕಾಂಗ್ರೆಸ್ನ ಸೋಲಿಗೆ ಕಾರಣವಾಗಬಹುದು. ಕಾಂಗ್ರೆಸ್ನಲ್ಲಿ ಅಭ್ಯರ್ಥಿ ವಿಚಾರದಲ್ಲಿ ಅಸಮಾಧಾನವಿದೆ. ಕಾಂಗ್ರೆಸ್ನವರೇ ಸೇರಿ ಬಿಜೆಪಿಯನ್ನು ಎರಡೂ ಕಡೆ ಗೆಲ್ಲಿಸಬಹುದು ಎಂದು ವಿಶ್ಲೇಷಿಸಿದರು.
ಗ್ಯಾರಂಟಿಗೆ ಹಣ ಹೊಂದಿಸಲು ಬೆಲೆ ಏರಿಕೆ
ಕಳೆದೊಂದು ತಿಂಗಳಿಂದ ಮಧ್ಯಪ್ರಾಚ್ಯದಲ್ಲಿ ಯುದ್ಧ ಪ್ರಾರಂಭವಾಗಿದೆ. ಕಚ್ಚಾ ತೈಲಕ್ಕಾಗಿ ಇರಾನ್, ಸೌದಿ ಅರೇಬಿಯಾ ಸೇರಿ ಗಲ್ಫ್ ರಾಷ್ಟ್ರಗಳನ್ನು ಅವಲಂಬಿಸಿದ್ದೇವೆ. ಅದರಿಂದ ಅವುಗಳ ಬೆಲೆಯಲ್ಲಿ ಏರಿಕೆ ಆಗಬಹುದು. ಕಾಂಗ್ರೆಸ್ನವರು ಗ್ಯಾರಂಟಿ ಮುಂದಿಟ್ಟು ಕಳೆದ ಎರಡು ವರ್ಷಗಳಿಂದ ಬೆಲೆ ಏರಿಸುತ್ತಲೇ ಬಂದಿದ್ದಾರೆ. ಇವರ ಜನವಿರೋಧಿ ನೀತಿಗಳಿಗೆ ಬಿಜೆಪಿಯನ್ನು ಟ್ಯಾಗ್ ಮಾಡುವುದು ಸರಿಯಲ್ಲ ಎಂದರು.

