
ವಿವಿಧ ಕೈಗಾರಿಕೆಗಳಲ್ಲಿ ಆರು ಲಕ್ಷ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ.
ದಾವೋಸ್ ಶೃಂಗಸಭೆ ಯಶಸ್ವಿ: ರಾಜ್ಯದಲ್ಲಿ 6 ಲಕ್ಷ ಉದ್ಯೋಗ ಸೃಷ್ಟಿಯ ನಿರೀಕ್ಷೆ
ಕರ್ನಾಟಕದಲ್ಲಿ ಭೂಮಿ ಹಂಚಿಕೆ, ಶಾಸನಬದ್ಧ ಅನುಮೋದನೆಗಳು, ನೀರು, ವಿದ್ಯುತ್ ಪೂರೈಕೆ ಮತ್ತು ಕಾಲಮಿತಿಗೆ ಒಳಪಟ್ಟ ತ್ವರಿತ ಅನುಮತಿ ನೀಡಲು ಸರ್ಕಾರ ನಿಕಟವಾಗಿ ಕೆಲಸ ಮಾಡಲಾಗುತ್ತಿದೆ ಎಂದು ಸಚಿವ ಎಂ.ಬಿ. ಪಾಟೀಲ್ ತಿಳಿಸಿದರು.
ದಾವೋಸ್ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ರಾಜ್ಯದ ಎಲೆಕ್ಟ್ರಾನಿಕ್ಸ್ ಸಿಸ್ಟಮ್ ಡಿಸೈನ್ ಆ್ಯಂಡ್ ಮ್ಯಾನುಫ್ಯಾಕ್ಚರಿಂಗ್, ಸೆಮಿಕಂಡಕ್ಟರ್ಸ್, ವಾಹನ ಹಾಗೂ ವಿದ್ಯುತ್ಚಾಲಿತ ವಾಹನ (ಇವಿ) ತಯಾರಿಕೆ, ಏರೋಸ್ಪೇಸ್ ಆ್ಯಂಡ್ ಡಿಫೆನ್ಸ್ ತಯಾರಿಕಾ ವಲಯಗಳಲ್ಲಿ 1.5 ಲಕ್ಷ ಕೋಟಿ ರೂ. ಮೊತ್ತದ ಬಂಡವಾಳ ಹೂಡಿಕೆ ನಿರೀಕ್ಷಿಸಲಾಗಿದೆ.
ಈ ಶೃಂಗಸಭೆಯಲ್ಲಿನ ಹೂಡಿಕೆಯಲ್ಲದೆ ರಾಜ್ಯಕ್ಕೆ ಕಳೆದ 11 ತಿಂಗಳುಗಳಲ್ಲಿ ತಯಾರಿಕೆ, ನವೀಕರಿಸಬಹುದಾದ ಇಂಧನ ಮೂಲಗಳು, ಡೇಟಾ ಸೆಂಟರ್ ಮತ್ತು ʼಜಿಸಿಸಿʼಗಳಲ್ಲಿ 1.1 ಲಕ್ಷ ಕೋಟಿ ರೂ. ಮೊತ್ತದ ಹೊಸ ಹೂಡಿಕೆಗಳು ಹರಿದು ಬಂದಿದೆ.
ಯಾವ ವಲಯಕ್ಕೆ ಎಷ್ಟು ಹಣ ?
ತಯಾರಿಕೆ ಮತ್ತು ಕೈಗಾರಿಕಾ ವಲಯಕ್ಕೆ 66,293 ಕೋಟಿ ರೂ. ನವೀಕರಿಸಬಹುದಾದ ಇಂಧನ ವಲಯಕ್ಕೆ 20,913 ಕೋಟಿ ರೂ. ಜಾಗತಿಕ ಸಾಮರ್ಥ್ಯ ಕೇಂದ್ರಗಳಿಂದ (ಜಿಸಿಸಿ) 12,500 ಕೋಟಿ ರೂ. ಮತ್ತು ಡೇಟಾ ಸೆಂಟರ್ಗಳಿಂದ 6,350 ಕೋಟಿ ರೂ. ಬಂಡವಾಳ ಹೂಡಿಕೆಯಾಗಿದೆ.
ಆರು ಲಕ್ಷ ಉದ್ಯೋಗ ಸೃಷ್ಟಿ
ಬೆಂಗಳೂರಿನಲ್ಲಿ ಫೆಬ್ರವರಿ 2025 ರಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಶೃಂಗಸಭೆಯಲ್ಲಿ ರಾಜ್ಯಕ್ಕೆ 10.27 ಲಕ್ಷ ಕೋಟಿ ರೂ. ಹೂಡಿಕೆಯಾಗುವ ಭರವಸೆ ಇತ್ತು. ದಾವೋಸ್ ಶೃಂಗಸಭೆಯಲ್ಲಿನ ಬಂಡವಾಳ ಹೂಡಿಕೆಯೂ ಸೇರಿ ಅಂದಾಜು 6 ಲಕ್ಷಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿ ಆಗುವುದನ್ನು ನಿರೀಕ್ಷಿಸಲಾಗಿದೆ.
ಉದ್ಯಮಿಗಳಿಗೆ ರಾಜ್ಯವೇ ಅಚ್ಚುಮೆಚ್ಚು
ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಭೂಮಿ ಹಂಚಿಕೆ, ಶಾಸನಬದ್ಧ ಅನುಮೋದನೆಗಳು, ನೀರು, ವಿದ್ಯುತ್ ಪೂರೈಕೆ ಮತ್ತು ಕಾಲಮಿತಿಗೆ ಒಳಪಟ್ಟ ತ್ವರಿತ ಅನುಮತಿ ನೀಡಲು ರಾಜ್ಯ ಸರ್ಕಾರವು ಹೂಡಿಕೆದಾರರ ಜೊತೆಗೆ ನಿಕಟವಾಗಿ ಕೆಲಸ ಮಾಡಲಾಗುತ್ತಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದರು.
ಶನಿವಾರ(ಜ.31) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಉನ್ನತ ಮಟ್ಟದ ನಿಯೋಗವು ಜಾಗತಿಕ ಮತ್ತು ಭಾರತದ ಪ್ರಮುಖ ಬಹುರಾಷ್ಟ್ರೀಯ ಕಂಪನಿಗಳು, ಹೂಡಿಕೆದಾರರು, ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳು, ಸರ್ಕಾರಿ ಪ್ರಮುಖರು ಮತ್ತು ವಿಶ್ವ ಆರ್ಥಿಕ ವೇದಿಕೆಯ ಉನ್ನತಾಧಿಕಾರಿಗಳ ಜೊತೆಗೆ 45ಕ್ಕೂ ಹೆಚ್ಚು ದ್ವಿಪಕ್ಷೀಯ ಸಭೆಗಳನ್ನು ನಡೆಸಿದ್ದು, ಈ ಸಭೆಗಳಲ್ಲಿ ಏರೊಸ್ಪೇಸ್ ಆ್ಯಂಡ್ ಡಿಫೆನ್ಸ್, ಅಡ್ವಾನ್ಸ್ಡ್ ಮ್ಯಾನುಫ್ಯಾಕ್ಚರಿಂಗ್, ಪಾನೀಯಗಳು ಮತ್ತು ಆಹಾರ ಸಂಸ್ಕರಣೆ, ಬಾಹ್ಯಾಕಾಶ ತಂತ್ರಜ್ಞಾನ, ಜೀವ ವಿಜ್ಞಾನ, ಡೇಟಾ ಸೆಂಟರ್ಗಳು, ಡಿಜಿಟಲ್ ಮೂಲಸೌಲಭ್ಯ ಮತ್ತು ಶುದ್ಧ ಇಂಧನ ಮುಂತಾದ ಆದ್ಯತೆಯ ವಲಯಗಳಲ್ಲಿನ 25ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಕಂಪನಿಗಳು ಮತ್ತು 15ಕ್ಕೂ ಹೆಚ್ಚು ಭಾರತದ ಕಂಪನಿಗಳು ಸೇರಿದ್ದವು ಎಂದರು.
ಆಹಾರ ಸಂಸ್ಕರಣೆ, ಶುದ್ಧ ಇಂಧನ ಉತ್ಪಾದನೆಗೆ ಅವಕಾಶ
ದಾವೋಸ್ ಸಮಾವೇಶದಿಂದ ರಾಜ್ಯದಲ್ಲಿ ವಾಯುಯಾನ, ಸರಕು ಸಾಗಣೆ, ಪಾನೀಯಗಳು ಮತ್ತು ಆಹಾರ ಸಂಸ್ಕರಣೆ, ಶುದ್ಧ ಇಂಧನ ಉತ್ಪಾದನೆ, ಅತ್ಯಾಧುನಿಕ ತಯಾರಿಕೆ, ಬಾಹ್ಯಾಕಾಶ ತಂತ್ರಜ್ಞಾನ, ಡೇಟಾ ಸೆಂಟರ್ಗಳು ಮತ್ತು ಜಾಗತಿಕ ಸಾಮರ್ಥ್ಯ ಕೇಂದ್ರಗಳು (ಜಿಸಿಸಿ), ಸಂಶೋಧನೆ ಹಾಗೂ ಅಭಿವೃದ್ಧಿ ಕ್ಷೇತ್ರಗಳಲ್ಲಿ ಹೊಸ ಬಂಡವಾಳ ಹೂಡಿಕೆ, ಉದ್ಯಮ ವಿಸ್ತರಣೆ ಮತ್ತು ಪಾಲುದಾರಿಕೆಗಳ ವಿಶ್ವಾಸಾರ್ಹ ಅವಕಾಶಗಳು ಸಾಕಾರಗೊಳ್ಳುವ ಸಾಧ್ಯತೆಗಳು ಹೆಚ್ಚಿವೆ ಎಂದು ಭರವಸೆ ವ್ಯಕ್ತಪಡಿಸಿದರು.
ಲಿಚೆಂಟೈನ್ ಮತ್ತು ಸಿಂಗಾಪುರದೊಂದಿಗೆ ಒಪ್ಪಂದ
ದಾವೋಸ್ ಭೇಟಿ ಸಂದರ್ಭದಲ್ಲಿ ಸರ್ಕಾರದಿಂದ ಸರ್ಕಾರಕ್ಕೆ (ಜಿ2ಜಿ) ಮಾತುಕತೆಗಳಲ್ಲಿ ಅದರಲ್ಲೂ ವಿಶೇಷವಾಗಿ ಲಿಚೆಂಟೈನ್ ಮತ್ತು ಸಿಂಗಾಪುರ ಸರ್ಕಾರದ ಜೊತೆಗೆ ಸಾಂಸ್ಥಿಕ ಸಹಯೋಗ ಬಲಪಡಿಸುವ ಮತ್ತು ರಾಜ್ಯಕ್ಕೆ ಜಂಟಿಯಾಗಿ ಹೂಡಿಕೆಗಳನ್ನು ಆಕರ್ಷಿಸುವುದರ ಬಗ್ಗೆ ಹೆಚ್ಚು ಗಮನಹರಿಸಲಾಗಿದೆ ಎಂದು ತಿಳಿಸಿದರು.

