ಇವ ನಮ್ಮವ ಇವ ನಮ್ಮವ: ಅಂತರ್ಜಾತಿ ವಿವಾಹಿತರ ರಕ್ಷಣೆಗೆ ಐತಿಹಾಸಿಕ ವಿಧೇಯಕ
x

"ಇವ ನಮ್ಮವ ಇವ ನಮ್ಮವ": ಅಂತರ್ಜಾತಿ ವಿವಾಹಿತರ ರಕ್ಷಣೆಗೆ ಐತಿಹಾಸಿಕ ವಿಧೇಯಕ

ವಿಧೇಯಕವು ಕೇವಲ ಒಂದು ಕಾನೂನು ದಾಖಲೆಯಲ್ಲ, ಬದಲಾಗಿ ಶತಶತಮಾನಗಳಿಂದ ಸಮಾಜವನ್ನು ಕಾಡುತ್ತಿರುವ ಜಾತಿ ವಿರುದ್ಧ ಮತ್ತು ಮರ್ಯಾದಾ ಹತ್ಯೆ ಎಂಬ ಅಮಾನವೀಯ ಕೃತ್ಯದ ವಿರುದ್ಧ ಹೂಡಿರುವ ಸಮರವಾಗಿದೆ.


Click the Play button to hear this message in audio format

ರಾಜ್ಯ ಸರ್ಕಾರವು 12ನೇ ಶತಮಾನದ ಬಸವಣ್ಣನವರ ಸಂದೇಶದ ಸಾಲುಗಳನ್ನೇ ಶೀರ್ಷಿಕೆಯಾಗಿಟ್ಟುಕೊಂಡು ದೇಶದಲ್ಲೇ ಮಾದರಿಯಾಗಬಲ್ಲ 'ಇವ ನಮ್ಮವ ಇವ ನಮ್ಮವ ವಿಧೇಯಕ-2026'ನ್ನು ಮಂಡಿಸಿದೆ.

ಸಚಿವ ಪ್ರಿಯಾಂಕ್ ಖರ್ಗೆ ಸದನದಲ್ಲಿ ಮಂಡಿಸಿರುವ ಈ ವಿಧೇಯಕವು ಕೇವಲ ಒಂದು ಕಾನೂನು ದಾಖಲೆಯಲ್ಲ, ಬದಲಾಗಿ ಶತಶತಮಾನಗಳಿಂದ ಸಮಾಜವನ್ನು ಕಾಡುತ್ತಿರುವ ಜಾತಿ ವಿರುದ್ಧ ಮತ್ತು ಮರ್ಯಾದಾ ಹತ್ಯೆ ಎಂಬ ಅಮಾನವೀಯ ಕೃತ್ಯದ ವಿರುದ್ಧ ಹೂಡಿರುವ ಸಮರವಾಗಿದೆ. ಅಂತರ್ಜಾತಿ ವಿವಾಹಿತರಿಗೆ ರಕ್ಷಣೆ ನೀಡುವುದು ಮತ್ತು ಅವರ ಆಯ್ಕೆಯ ಸ್ವಾತಂತ್ರ್ಯವನ್ನು ಗೌರವಿಸುವುದು ಈ ವಿಧೇಯಕದ ಪ್ರಮುಖ ಉದ್ದೇಶವಾಗಿದೆ.

ದೇಶವು ಸ್ವಾತಂತ್ರ್ಯ ಪಡೆದು ಏಳು ದಶಕಗಳಿಗೂ ಹೆಚ್ಚು ಕಾಲವಾಗಿದ್ದರೂ ಇಂದಿಗೂ ಅಂತರ್ಜಾತಿ ವಿವಾಹಗಳು ಸಾಮಾಜಿಕ ಬಹಿಷ್ಕಾರಕ್ಕೆ, ಹಿಂಸೆಗೆ ಮತ್ತು ಕ್ರೂರ ಹತ್ಯೆಗಳಿಗೆ ಕಾರಣವಾಗುತ್ತಿವೆ. ಪ್ರೀತಿ ಮತ್ತು ವಿವಾಹದಂತಹ ವೈಯಕ್ತಿಕ ನಿರ್ಧಾರಗಳಲ್ಲಿ ಜಾತಿಯ ಹಸ್ತಕ್ಷೇಪವು ಸಂವಿಧಾನ ನೀಡಿರುವ ಬದುಕುವ ಹಕ್ಕು ಮತ್ತು ಸಮಾನತೆಯ ಹಕ್ಕಿಗೆ ಧಕ್ಕೆಯುಂಟು ಮಾಡುತ್ತಿವೆ. ರಾಜ್ಯದಲ್ಲಿಯೂ ಇತ್ತೀಚಿನ ವರ್ಷಗಳಲ್ಲಿ ಮರ್ಯಾದಾ ಹತ್ಯೆಗಳು ವರದಿಯಾಗುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಈ ಹಿನ್ನೆಲೆಯಲ್ಲಿ, ಅಂತರ್ಜಾತಿ ವಿವಾಹಗಳ ಹಕ್ಕುಗಳನ್ನು ರಕ್ಷಿಸಲು ವಿಶೇಷ ಕಾನೂನಿನ ಅಗತ್ಯವನ್ನರಿತು ಈ ವಿಧೇಯಕವನ್ನು ತರಲಾಗಿದೆ.

ಕಠಿಣ ಶಿಕ್ಷೆ, ದಂಡದ ನಿಬಂಧನೆಗಳು

ಮರ್ಯಾದೆಯ ಹೆಸರಿನಲ್ಲಿ ನಡೆಯುವ ಅಪರಾಧಗಳನ್ನು ಈ ವಿಧೇಯಕವು ಗಂಭೀರವಾಗಿ ಪರಿಗಣಿಸಿದೆ. ಮರ್ಯಾದಾ ಹತ್ಯೆ ನಡೆಸುವವರಿಗೆ ಕನಿಷ್ಠ 5 ವರ್ಷಗಳ ಜೈಲು ಶಿಕ್ಷೆಯನ್ನು ವಿಧೇಯಕ ಪ್ರಸ್ತಾಪಿಸಿದೆ. ಇದು ಪ್ರಕರಣದ ತೀವ್ರತೆಯ ಮೇಲೆ ಜೀವಾವಧಿವರೆಗೂ ವಿಸ್ತರಿಸಬಹುದು.ದಂಪತಿಗಳಲ್ಲಿ ಯಾರಿಗಾದರೂ ದೈಹಿಕವಾಗಿ ಹಲ್ಲೆ ನಡೆಸಿ ತೀವ್ರ ಗಾಯಗೊಳಿಸಿದರೆ, ಅಂತವರಿಗೆ 3 ವರ್ಷಕ್ಕಿಂತ ಕಡಿಮೆ ಇಲ್ಲದ ಜೈಲು ಶಿಕ್ಷೆ ಮತ್ತು 3 ಲಕ್ಷ ರೂ.ಗಳ ಭಾರಿ ದಂಡ ವಿಧಿಸಲು ಅವಕಾಶವಿದೆ. ಕೆಲವು ಗ್ರಾಮಗಳಲ್ಲಿ ಅಂತರ್ಜಾತಿ ವಿವಾಹಗಳ ವಿರುದ್ಧ ಸಭೆಗಳನ್ನು ನಡೆಸಿ ಬಹಿಷ್ಕಾರ ಹಾಕುವ ಪದ್ಧತಿಯಿದೆ. ಇಂತಹ ಸಭೆಗಳನ್ನು ನಡೆಸುವುದು ಅಥವಾ ಅದಕ್ಕೆ ಬೆಂಬಲ ನೀಡುವುದು ಈಗ 5 ವರ್ಷಗಳ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ. ದಂಡಕ್ಕೆ ಅರ್ಹವಾದ ಅಪರಾಧವಾಗಿದೆ. ಸಾಕ್ಷ್ಯಗಳನ್ನು ತಿರುಚುವುದು ಅಥವಾ ಪಿತೂರಿ ಮಾಡುವುದನ್ನು ಜಾಮೀನು ರಹಿತ ಅಪರಾಧ ಎಂದು ಪರಿಗಣಿಸಲಾಗಿದ್ದು, ಅಪರಾಧಿಗಳು ಸುಲಭವಾಗಿ ತಪ್ಪಿಸಿಕೊಳ್ಳದಂತೆ ಕಾನೂನು ಒದಗಿಸಲಾಗಿದೆ.

ಅತ್ಯಾಚಾರ ನಡೆಸಿ ವಂಚನೆಗೆ ತಡೆ

ವಿಧೇಯಕದಲ್ಲಿರುವ ಕ್ರಾಂತಿಕಾರಕ ಅಂಶವೆಂದರೆ, ಮದುವೆಯ ಭರವಸೆ ನೀಡಿ ಲೈಂಗಿಕ ಸಂಪರ್ಕ ಬೆಳೆಸಿ, ನಂತರ ಜಾತಿಯ ಕಾರಣ ನೀಡಿ ಮದುವೆಯಿಂದ ಹಿಂದೆ ಸರಿಯುವುದನ್ನು ಅತ್ಯಾಚಾರ ಎಂದು ಪರಿಗಣಿಸಲಾಗಿದೆ. ಅನೇಕ ಪ್ರಕರಣಗಳಲ್ಲಿ ಪುರುಷರು ಅಥವಾ ಅವರ ಕುಟುಂಬಸ್ಥರು ಮದುವೆಯ ಮಾತುಕತೆಯ ನಂತರ ಜಾತಿ ಒಪ್ಪುತ್ತಿಲ್ಲ ಎಂಬ ನೆಪವೊಡ್ಡಿ ಯುವತಿಯನ್ನು ವಂಚಿಸುತ್ತಾರೆ. ಮನೆಯವರ ಒತ್ತಡ ಅಥವಾ ಜಾತಿ ಆಧಾರಿತ ಕಾರಣ ನೀಡಿ ಮದುವೆ ನಿರಾಕರಿಸಿದರೆ ಜೀವಾವಧಿ ಶಿಕ್ಷೆಯವರೆಗೂ ಶಿಕ್ಷೆ ವಿಧಿಸಲು ಕಾನೂನು ಅನುವು ಮಾಡಿಕೊಡುತ್ತದೆ. ಇದು ಮಹಿಳೆಯರ ಘನತೆಯನ್ನು ಎತ್ತಿಹಿಡಿಯುವಲ್ಲಿ ಮಹತ್ವದ ಪಾತ್ರ ವಹಿಸಲಿದೆ.

ಸರ್ಕಾರದ ಹೊಣೆಗಾರಿಕೆ

ಅಂತರ್ಜಾತಿ ವಿವಾಹವಾದ ನಂತರ ದಂಪತಿಗಳು ತಮ್ಮ ಜೀವಕ್ಕೆ ಬೆದರಿಕೆಯಿದೆ ಎಂದು ಭಾವಿಸಿದರೆ, ಅವರಿಗೆ ರಕ್ಷಣೆ ನೀಡುವುದು ಪೊಲೀಸರ ಮತ್ತು ಸರ್ಕಾರದ ಪ್ರಾಥಮಿಕ ಜವಾಬ್ದಾರಿಯಾಗಿದೆ. ಪ್ರತಿ ಜಿಲ್ಲೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳ ನೇತೃತ್ವದಲ್ಲಿ ವಿಶೇಷ ಕೋಶ ರಚಿಸಲಾಗುತ್ತದೆ. ಇದು ಕಿರುಕುಳದ ದೂರುಗಳನ್ನು ತಕ್ಷಣವೇ ನಿರ್ವಹಿಸುತ್ತದೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ನಿವೃತ್ತ ನ್ಯಾಯಾಧೀಶರು, ಕಂದಾಯ ಅಧಿಕಾರಿಗಳು ಮತ್ತು ಉಪ ನೋಂದಣಾಧಿಕಾರಿಗಳನ್ನೊಳಗೊಂಡ ವೇದಿಕೆಯು ದಂಪತಿಗಳಿಗೆ ಕಾನೂನು ಮತ್ತು ಸಾಮಾಜಿಕ ಮಾರ್ಗದರ್ಶನ ನೀಡಲಾಗುವುದು. ವಿವಾಹಿತ ಜೋಡಿಯ ಸುರಕ್ಷತೆಯ ದೃಷ್ಟಿಯಿಂದ ಸಾಕ್ಷಿಗಳ ಗುರುತು ಮತ್ತು ವಿಳಾಸವನ್ನು ಬಹಿರಂಗಪಡಿಸದಂತೆ ಸಾಕ್ಷಿ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಲಾಗುವುದು.

ಸಾಮಾಜಿಕ, ಆರ್ಥಿಕ ಬಹಿಷ್ಕಾರದ ವಿರುದ್ಧ ಕ್ರಮ

ಜಾತಿ ವಿವಾಹವಾದವರನ್ನು ಊರಿನಿಂದ ಹೊರಹಾಕುವುದು, ಅವರಿಗೆ ಕೆಲಸ ನೀಡಲು ನಿರಾಕರಿಸುವುದು, ಅಥವಾ ಸಾರ್ವಜನಿಕ ಪೂಜಾ ಸ್ಥಳಗಳಿಗೆ ಪ್ರವೇಶ ನಿರಾಕರಿಸುವುದು ಅತ್ಯಂತ ಕೆಟ್ಟ ಪದ್ಧತಿಗಳು. ವಿಧೇಯಕವು ಇವುಗಳನ್ನು ಸ್ಪಷ್ಟವಾಗಿ ನಿಷೇಧಿಸಿದೆ. ವಯಸ್ಕರಿಗೆ ತಮ್ಮ ಜೀವನ ಸಂಗಾತಿಯನ್ನು ಆರಿಸಿಕೊಳ್ಳಲು ಪೂರ್ಣ ಸ್ವಾತಂತ್ರ್ಯವಿದೆ, ಇಲ್ಲಿ ಪಾಲಕರ ಒಪ್ಪಿಗೆ ಕಡ್ಡಾಯವಲ್ಲ. ದಂಪತಿಗೆ ಸಾಮಾಜಿಕ ಬಹಿಷ್ಕಾರ ಹಾಕಿದರೆ ಅಥವಾ ಅವರ ಆರ್ಥಿಕ ಚಟುವಟಿಕೆಗಳಿಗೆ ಅಡ್ಡಿಪಡಿಸಿದರೆ ಅದು ಶಿಕ್ಷಾರ್ಹ ಅಪರಾಧವಾಗಲಿದೆ. ಬಲವಂತದ ಗರ್ಭಪಾತ ಅಥವಾ ದಂಪತಿಗಳನ್ನು ಬೇರ್ಪಡಿಸಿ ಬೇರೆ ಮದುವೆ ಮಾಡಿಸುವ ಪ್ರಯತ್ನಗಳನ್ನು ಈ ಕಾನೂನಿನ್ವಯ ಕ್ರಮ ಕೈಗೊಳ್ಳಲಾಗುವುದು.

Read More
Next Story