Assembly Elections 2026| ಪಂಚ ರಾಜ್ಯಗಳ ಚುನಾವಣೆ ದಿನಾಂಕ ಪ್ರಕಟ: ಏಪ್ರಿಲ್ 9ರಿಂದ ಮತದಾನ, ಮೇ 4ರಂದು ಫಲಿತಾಂಶ
x

Assembly Elections 2026| ಪಂಚ ರಾಜ್ಯಗಳ ಚುನಾವಣೆ ದಿನಾಂಕ ಪ್ರಕಟ: ಏಪ್ರಿಲ್ 9ರಿಂದ ಮತದಾನ, ಮೇ 4ರಂದು ಫಲಿತಾಂಶ

ಅಸ್ಸಾಂ, ಕೇರಳ ಮತ್ತು ಪುದುಚೇರಿ: ಈ ಮೂರು ಕಡೆಗಳಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಏಪ್ರಿಲ್ 9 ರಂದು ಮತದಾನ ನಡೆಯಲಿದೆ.


Click the Play button to hear this message in audio format

ತೀವ್ರ ಕುತೂಹಲ ಕೆರಳಿಸಿದ್ದ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ರಾಜ್ಯಗಳು ಹಾಗೂ ಪುದುಚೇರಿ ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಚುನಾವಣೆಗಳ ವೇಳಾಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗವು ಭಾನುವಾರ ಪ್ರಕಟಿಸಿದೆ.

ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಚುನಾವಣಾ ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದರು. ಏಪ್ರಿಲ್ 9 ರಿಂದ ವಿವಿಧ ರಾಜ್ಯಗಳಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಲಿದ್ದು, ಎಲ್ಲ ರಾಜ್ಯಗಳ ಮತ ಎಣಿಕೆ ಕಾರ್ಯವು ಮೇ 4 ರಂದು ಏಕಕಾಲದಲ್ಲಿ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು. ಇದೇ ವೇಳೆ ಕರ್ನಾಟಕದ ಎರಡು ಕ್ಷೇತ್ರಗಳ ಉಪಚುನಾವಣೆಯ ದಿನಾಂಕವನ್ನು ಕೂಡ ಆಯೋಗ ಘೋಷಿಸಿದೆ.

ರಾಜ್ಯವಾರು ಚುನಾವಣಾ ವೇಳಾಪಟ್ಟಿಯ ವಿವರ ಇಲ್ಲಿದೆ

ಅಸ್ಸಾಂ, ಕೇರಳ ಮತ್ತು ಪುದುಚೇರಿ: ಈ ಮೂರು ಕಡೆಗಳಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಏಪ್ರಿಲ್ 9 ರಂದು ಮತದಾನ ನಡೆಯಲಿದೆ.

ತಮಿಳುನಾಡು: ತಮಿಳುನಾಡಿನಲ್ಲಿಯೂ ಒಂದೇ ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದ್ದು, ಏಪ್ರಿಲ್ 23ರಂದು ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ಪಶ್ಚಿಮ ಬಂಗಾಳ: ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿರುವ ಪಶ್ಚಿಮ ಬಂಗಾಳದಲ್ಲಿ ಒಟ್ಟು 2 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮೊದಲ ಹಂತದ ಮತದಾನ ಏಪ್ರಿಲ್ 23 ರಂದು ನಡೆದರೆ, ಎರಡನೇ ಹಂತದ ಮತದಾನ ಏಪ್ರಿಲ್ 29 ರಂದು ನಡೆಯಲಿದೆ.


ಕರ್ನಾಟಕದಲ್ಲಿ ಉಪಚುನಾವಣೆ

ಪಂಚರಾಜ್ಯಗಳ ಚುನಾವಣೆಯ ಜೊತೆಗೆ ಕರ್ನಾಟಕದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೂ ಮುಹೂರ್ತ ನಿಗದಿಯಾಗಿದೆ. ರಾಜ್ಯದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 9 ರಂದು ಉಪಚುನಾವಣೆ ನಡೆಯಲಿದೆ.

ಎಲ್ಲಾ ಐದು ರಾಜ್ಯಗಳ (ಕೇಂದ್ರಾಡಳಿತ ಪ್ರದೇಶ ಸೇರಿ) ವಿಧಾನಸಭಾ ಚುನಾವಣೆ ಹಾಗೂ ಕರ್ನಾಟಕದ ಉಪಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯು ಮೇ 4 ರಂದು ನಡೆಯಲಿದ್ದು, ಅಂದೇ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

Live Updates

  • 15 March 2026 8:51 PM IST

    ಅಸ್ಸಾಂ ಚುನಾವಣೆ: 14 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಎಎಪಿ

    ಅಸ್ಸಾಂ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಿಸಿದ ಬೆನ್ನಲ್ಲೇ 14 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಎಎಪಿ ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿ ಅಸ್ಸಾಂ ರಾಜ್ಯ ಉಪಾಧ್ಯಕ್ಷ ಅನುರೂಪ ದೇಕರಾಜ ಅವರಿಗೆ ಟಿಕೆಟ್ ನೀಡಲಾಗಿದೆ.

    14 ಅಭ್ಯರ್ಥಿಗಳ ಪಟ್ಟಿಯಲ್ಲಿರುವ ಎಲ್ಲಾ ಕ್ಷೇತ್ರಗಳು ಬ್ರಹ್ಮಪುತ್ರ ಕಣಿವೆಯಲ್ಲಿವೆ. ದೇಕರಾಜ ಗುವಾಹಟಿ ಸೆಂಟ್ರಲ್ನ ಹೊಸ ಸ್ಥಾನದಿಂದ ಮತ್ತು ರೇಣುಕಾ ತಿಮುಂಗ್ಪಿ ಬೊಕಾಜನ್ನಿಂದ ಸ್ಪರ್ಧಿಸಲಿದ್ದಾರೆ.

    ಎಎಪಿ ರಾಜ್ಯ ಪ್ರಭಾರ ಉಸ್ತುವಾರಿಯಾದ ರಾಜೇಶ್ ಶರ್ಮಾ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಅಚ್ಯುತ್ ದಾಸ್ (ನವೋಬೋಯಿಚಾ), ತಪನ್ ಗೊಗೊಯ್ (ಶಿವಸಾಗರ್), ಜಹಿದುಲ್ ಇಸ್ಲಾಂ ಖಾನ್ (ಚೆಂಗಾ), ರಂಜೀತ್ ಬೊರೊ (ನಡುವಾ), ಪಲ್ಲವ್ ಸೈಕಿಯಾ (ಟಿಟಾಬೋರ್) ಮತ್ತು ಜಿನ್ನಾ ಅಮೀರ್ ಹುಸೇನ್ (ಪೂರ್ವ ಗೋಲ್ಪಾರ) ಸೇರಿದ್ದಾರೆ.

    ಅಸ್ಸಾಂ ವಿಧಾನಸಭೆಯಲ್ಲಿ ಇನ್ನೂ ಖಾತೆ ತೆರೆಯದ ಎಎಪಿ ಬೇರೆ ಯಾವುದೇ ವಿರೋಧ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳದೆ ಏಕಾಂಗಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ. ಅಸ್ಸಾಂ ಚುನಾವಣಾ ಫಲಿತಾಂಶ ಮೇ 4 ರಂದು ಪ್ರಕಟವಾಗಲಿದೆ.

  • 15 March 2026 8:47 PM IST

    ಬಂಗಾಳದಲ್ಲಿ ಎಡಪಕ್ಷಗಳು ಪುಟಿದೇಳಲಿವೆ- ಡಿ.ರಾಜಾ ವಿಶ್ವಾಸ

    ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಎಡಪಕ್ಷಗಳು ಮತ್ತೆ ಪುಟಿದೇಳುವ ವಿಶ್ವಾಸವಿದೆ ಎಂದು ಸಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಿ. ರಾಜಾ ಪ್ರತಿಪಾದಿಸಿದ್ದಾರೆ.

    ಚುನಾವಣಾ ಆಯೋಗವು ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ಚುನಾವಣಾ ದಿನಾಂಕ ಘೋಷಿಸುವುದಕ್ಕಿಂತ ಮೊದಲು ಸಿಪಿಐ ನಾಯಕರ ಈ ಹೇಳಿಕೆ ಎಡಪಕ್ಷಗಳ ಚುನಾವಣಾ ತಂತ್ರಗಾರಿಕೆಯನ್ನು ಕುತೂಹಲದಿಂದ ನೋಡುವಂತೆ ಮಾಡಿದೆ.

    "ಪಶ್ಚಿಮ ಬಂಗಾಳದಲ್ಲಿ ಕಠಿಣ ಹೋರಾಟ ಇರಲಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ, ಎಡಪಕ್ಷಗಳು ವಿಶ್ವಾಸ ಹೊಂದಿದ್ದು, ಮತ್ತೆ ರಾಜಕೀಯವಾಗಿ ಪುಟಿದೇಳಲಿದ್ದಾರೆ. ಅಲ್ಲದೇ ರಾಜ್ಯ ರಾಜಕೀಯ ಚರ್ಚೆಯನ್ನು ರೂಪಿಸುವ ಶಕ್ತಿಯಾಗಿ ಹೊರಹೊಮ್ಮಲಿದ್ದಾರೆ” ಎಂದು ರಾಜಾ ಅವರು ಜಾರ್ಖಂಡ್ನ ರಾಂಚಿಯ ಬಿರ್ಸಾ ಮುಂಡಾ ವಿಮಾನ ನಿಲ್ದಾಣದಲ್ಲಿ ತಿಳಿಸಿದ್ದಾರೆ.

    1977 ಮತ್ತು 2011 ರವರೆಗೆ 34 ವರ್ಷಗಳ ಕಾಲ ಬಂಗಾಳವನ್ನು ಆಳಿದ ಎಡಪಕ್ಷಗಳು 2021 ರ ವಿಧಾನಸಭಾ ಚುನಾವಣೆಯಲ್ಲಿ ಒಂದೇ ಒಂದು ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ.

    ಪಕ್ಷದ ಶತಮಾನೋತ್ಸವ ಆಚರಣೆಯಲ್ಲಿ ಭಾಗವಹಿಸಲು ಎಡಪಕ್ಷಗಳ ನಾಯಕರು ರಾಜ್ಯಕ್ಕೆ ಆಗಮಿಸಿದ್ದಾರೆ. ಚುನಾವಣೆಗೆ ಹೋಗುವ ರಾಜ್ಯಗಳಲ್ಲಿ ಪರಿಸ್ಥಿತಿಗಳು ವೈವಿಧ್ಯಮಯವಾಗಿವೆ ಎಂದು ಅವರು ಹೇಳಿದ್ದಾರೆ.

    "ಕೇರಳದಲ್ಲಿ ನಾವು ಎಡ ಪ್ರಜಾಸತ್ತಾತ್ಮಕ ರಂಗದ (LDF) ಭಾಗವಾಗಿದ್ದೇವೆ. ಆ ಒಕ್ಕೂಟದಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಎಲ್ಡಿಎಫ್ ಮೂರನೇ ಅವಧಿಗೆ ಅಧಿಕಾರಕ್ಕೆ ಮರಳುವ ಉತ್ತಮ ಅವಕಾಶ ಹೊಂದಿದೆ. ತಮಿಳುನಾಡಿನಲ್ಲಿ ಸೀಟು ಹಂಚಿಕೆ ವ್ಯವಸ್ಥೆಗಳ ಕುರಿತು ಪ್ರಸ್ತುತ ಡಿಎಂಕೆ ಒಕ್ಕೂಟದೊಂದಿಗೆ ಚರ್ಚೆಗಳು ನಡೆಯುತ್ತಿವೆ. ಒಂದು ತೀರ್ಮಾನದಲ್ಲಿ ಎಲ್ಲವೂ ಸ್ಪಷ್ಟವಾಗುತ್ತದೆ ಎಂದು ಹೇಳಿದ್ದಾರೆ.

  • 15 March 2026 8:39 PM IST

    ಕೇರಳದ ರಾಜಕೀಯ ದ್ವಿ- ಧ್ರುವೀಕರಣ ಬಿಜೆಪಿಗೆ ವರವಾಗಲಿದೆಯೇ?

    ಕೇರಳ ರಾಜಕೀಯದಲ್ಲಿ ಬಿಜೆಪಿ ಎಂದಿಗೂ ಪ್ರಮುಖ ರಾಜಕೀಯ ಶಕ್ತಿಯಾಗಿ ಬೆಳೆದಿಲ್ಲ. ಆದರೆ, ಪ್ರತಿ ಚುನಾವಣೆಯಲ್ಲೂ ಪಕ್ಷ ಮತ್ತು ಅದರ ಬೆಂಬಲಿಗರು ಕ್ರಮೇಣ ದಕ್ಷಿಣದ ರಾಜ್ಯಗಳಲ್ಲಿ ಕಮಲ ಅರಳಿಸುವ ಪ್ರಯತ್ನ ನಡೆಸುತ್ತಿದ್ದು, ಕಳೆದ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಪರವಾದ ಅಲೆ ಇದೀಗ ವಿಧಾನಸಭಾ ಚುನಾವಣೆಯಲ್ಲಿ ಕುತೂಹಲ ಕೆರಳಿಸಿದೆ.

    ಏ.9 ರಂದು ಚುನಾವಣೆ ನಡೆಯಲಿರುವ ರಾಜ್ಯದಲ್ಲಿ ಕೇಸರಿ ಪಕ್ಷದ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಸ್ವಾಟ್(SWOT) ವಿಶ್ಲೇಷಣೆಯನ್ನು ಇಲ್ಲಿ ನೋಡೋಣ.

    ಸಾಮರ್ಥ್ಯವೇನು?

    1. ಇತ್ತೀಚಿನ ನಾಗರಿಕ ಚುನಾವಣೆಯಲ್ಲಿ ತಿರುವನಂತಪುರಂ ನಗರ ಪಾಲಿಕೆ ಚುನಾವಣೆಯಲ್ಲಿ ಪಕ್ಷದ ಐತಿಹಾಸಿಕ ಗೆಲುವು ಕಾರ್ಯಕರ್ತರಿಗೆ ಹೊಸ ಶಕ್ತಿ ತುಂಬಿದೆ.

    2. ಪ್ರಧಾನಿ ನರೇಂದ್ರ ಮೋದಿಯವರ ಚಿತ್ರಣ ಮತ್ತು ವಿವಿಧ ವರ್ಗಗಳ ಜನರಲ್ಲಿ ಮೋದಿ ಪರ ಇರುವ ಅಲೆ.

    3. ಚುನಾವಣಾ ಪ್ರಚಾರದಲ್ಲಿ ಆರಂಭಿಕ ಮುನ್ನಡೆ ಸಾಧಿಸಿರುವ ಪಕ್ಷ.

    ದೌರ್ಬಲ್ಯಗಳೇನು?

    1. ಚುನಾವಣಾ ಹಿನ್ನಡೆಗಳ ದೀರ್ಘ ಇತಿಹಾಸ ಮತ್ತು ಆಡಳಿತ ರೂಢ ಸಿಪಿಐ(ಎಂ) ಮತ್ತು ವಿರೋಧ ಪಕ್ಷ ಕಾಂಗ್ರೆಸ್ ಪ್ರಾಬಲ್ಯ ಹೊಂದಿರುವ ರಾಜ್ಯದಲ್ಲಿ ಸಾಂಪ್ರದಾಯಿಕ ದ್ವಿಧ್ರುವೀಕರಣದ ರಾಜಕೀಯ ಮುರಿಯುವ ತೊಂದರೆ.

    2. 2024 ರ ವಯನಾಡಿನ ಭೂಕುಸಿತದಿಂದ ಬದುಕುಳಿದವರಿಗೆ ಹಣಕಾಸು ಪ್ಯಾಕೇಜ್ ಘೋಷಿಸದ ಹಿನ್ನಲೆ ಕೇಂದ್ರದ ವಿರುದ್ಧ ಸಿಪಿಐ(ಎಂ) ನೇತೃತ್ವದ ಆಡಳಿತ ಪಕ್ಷವು ನಡೆಸುತ್ತಿರುವ ವ್ಯಾಪಕ ಪ್ರಚಾರ ಎದುರಿಸಲು ಪಕ್ಷವು ಮಾರ್ಗೋಪಾಯ ಕಂಡುಕೊಳ್ಳಬೇಕಾಗುತ್ತದೆ.

    3. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ರಾಜ್ಯಕ್ಕೆ ಹಂಚಿಕೆಗಳನ್ನು ಕಡಿತಗೊಳಿಸಿದೆ. ಇತ್ತೀಚಿನ ಕೇಂದ್ರ ಬಜೆಟ್ಗಳಲ್ಲಿ ಕೇರಳಕ್ಕೆ ಯಾವುದೇ ಪ್ರಮುಖ ಯೋಜನೆ ನೀಡದಿದ್ದಕ್ಕಾಗಿ ಟೀಕೆಗಳು ಎದುರಾಗಿವೆ.

    ಅವಕಾಶಗಳು ಏನು?

    1. ವಿಶೇಷವಾಗಿ ನಗರ ಮತದಾರರು, ಯುವಕರ ವಿಭಾಗಗಳು ಮತ್ತು ಕೆಲವು ಸಮುದಾಯ ಗುಂಪುಗಳಲ್ಲಿ ಬೆಂಬಲದ ಕ್ರಮೇಣ ಕ್ರೋಢೀಕರಣವು ಪಕ್ಷದ ನಿರೀಕ್ಷೆಗಳನ್ನು ಸುಧಾರಿಸಬಹುದು.

    2. ಟ್ವೆಂಟಿ-20 ನಂತಹ ಪ್ರಭಾವಿ ಪಕ್ಷಗಳ ಪ್ರವೇಶದೊಂದಿಗೆ ಎನ್ಡಿಎ ಇತ್ತೀಚಿನ ವಿಸ್ತರಣೆಯು ಈ ಗುರಿಯನ್ನು ಸಾಧಿಸಲು ಸಹಾಯ ಮಾಡುತ್ತದೆ.

    3. ಕೇಂದ್ರದ ಕಲ್ಯಾಣ ಯೋಜನೆಗಳ ಜೊತೆಗೆ ಮೋದಿ ಸರ್ಕಾರದ ಅಡಿಯಲ್ಲಿ ಆಡಳಿತ ಮತ್ತು ಮೂಲಸೌಕರ್ಯ ಅಭಿವೃದ್ಧಿಯನ್ನು ಸರಿಯಾಗಿ ತಿಳಿಸಿದರೆ ಮತದಾರರೊಂದಿಗೆ ಪ್ರತಿಧ್ವನಿಸಬಹುದು ಎಂದು ಪಕ್ಷದ ನಾಯಕರ ನಂಬಿಕೆ.

    ಬೆದರಿಕೆ/ ಸವಾಲುಗಳೇನು?

    1. ಸಂಕೀರ್ಣ ಸಮುದಾಯ ಚಲನಶೀಲತೆ ಮತ್ತು ರಾಜಕೀಯವಾಗಿ ಜಾಗೃತ ಮತದಾರರನ್ನು ಹೊಂದಿರುವ ರಾಜ್ಯದಲ್ಲಿ ವಿಶಾಲವಾದ ಸಾಮಾಜಿಕ ಒಕ್ಕೂಟವನ್ನು ನಿರ್ಮಿಸುವುದು.

    2. ಕೇಸರಿ ಪಕ್ಷವು ಕೆಲವು ಭಾಗಗಳಿಗೆ ಪ್ರವೇಶಿಸಿದ್ದರೂ ಸಾಂಪ್ರದಾಯಿಕವಾಗಿ ಎಲ್ಡಿಎಫ್ ಮತ್ತು ಯುಡಿಎಫ್ ಅನ್ನು ಬೆಂಬಲಿಸುವ ವೈವಿಧ್ಯಮಯ ಗುಂಪುಗಳಲ್ಲಿ ತನ್ನ ಪ್ರಭಾವ ವಿಸ್ತರಿಸಲು ಅದು ಹೆಣಗಾಡುತ್ತಿದೆ.

    3. ಉತ್ತರ ಭಾರತದಲ್ಲಿ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಸನ್ಯಾಸಿಗಳು ಮತ್ತು ಪಾದ್ರಿಗಳ ಮೇಲಿನ ದಾಳಿಗಳ ನಂತರ ಅಲ್ಪಸಂಖ್ಯಾತ ಗುಂಪುಗಳು, ವಿಶೇಷವಾಗಿ ಕ್ರಿಶ್ಚಿಯನ್ ಸಮುದಾಯದ ವಿಭಾಗಗಳನ್ನು ದೂರವಿಡುವುದು ಸಹ ಪಕ್ಷಕ್ಕೆ ಒಂದು ಸವಾಲಾಗಿ ಕಂಡುಬರುತ್ತದೆ.

  • 15 March 2026 8:30 PM IST

    ಕೇರಳ: ಚುನಾವಣಾ ದಿನಾಂಕ ಘೋಷಣೆ ಬೆನ್ನಲ್ಲೇ 25 ಸ್ಥಾನಗಳಿಗೆ ಸಿಪಿಐ ಅಭ್ಯರ್ಥಿಗಳ ಹೆಸರು ಪ್ರಕಟ

    ಎಲ್ಡಿಎಫ್ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿರುವ ಸಿಪಿಐ ಪಕ್ಷ ಭಾನುವಾರ (ಏ.9) ಚುನಾವಣೆ ಘೋಷಿಸಿದ ಬೆನ್ನಲ್ಲೇ 25 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದೆ.

    ಸಿಪಿಐ ರಾಜ್ಯ ಕಾರ್ಯದರ್ಶಿ ಬಿನೋಯ್ ವಿಶ್ವಂ ಅವರು ಅಭ್ಯರ್ಥಿಗಳನ್ನು ಘೋಷಿಸಿದ್ದಾರೆ. ಎಲ್ಡಿಎಫ್ ಸರ್ಕಾರದಲ್ಲಿ ಸಿಪಿಐ ಪಕ್ಷವು ನಾಲ್ಕು ಸಚಿವ ಸ್ಥಾನಗಳನ್ನು ಪಡೆದಿದ್ದು, ಸಚಿವರಾದ ಜಿ.ಆರ್.ಅನಿಲ್, ಜೆ.ಚಿಂಚುರಾಣಿ, ಕೆ.ರಾಜನ್ ಮತ್ತು ಪಿ.ಪ್ರಸಾದ್ ಅವರಿಗೂ ಟಿಕೆಟ್ ನೀಡಿದೆ.

    ಉಳಿದಂತೆ ಅಭ್ಯರ್ಥಿಗಳ ಪಟ್ಟಿಯಲ್ಲಿ ಕೆ.ರಾಜನ್, ಮೊಹಮ್ಮದ್ ಮುಹಾಸಿನ್, ಇಟಿ ಟೈಸನ್ ಮತ್ತು ವಿ.ಆರ್. ಸುನಿಲ್ ಕುಮಾರ್ ಸೇರಿದಂತೆ ಸತತ ಎರಡು ಬಾರಿ ಶಾಸಕರಾದವರೂ ಇದ್ದಾರೆ.

    ಸಾಹಿತಿ ಆಲಂಕೋಡ್ ಲೀಲಾಕೃಷ್ಣನ್ ಅವರು ತ್ರಿಶೂರ್ನಿಂದ ಸ್ಪರ್ಧಿಸಲಿದ್ದಾರೆ. ನಟ್ಟಿಕಾದಲ್ಲಿ ಹಾಲಿ ಶಾಸಕ ಸಿ.ಸಿ.ಮುಕುಂದನ್ ಬದಲಿಗೆ ಮಾಜಿ ಶಾಸಕಿ ಗೀತಾ ಗೋಪಿ ಅವರನ್ನು ಕಣಕ್ಕಿಳಿಸಲಾಗಿದೆ.

    ಕೈಪಮಂಗಲಂ ಶಾಸಕ ಇಟಿ ಟೈಸನ್ ಅವರನ್ನು ಉತ್ತರ ಪರವೂರಿನಿಂದ ಕಣಕ್ಕಿಳಿಸಲಾಗಿದ್ದು, ಅಲ್ಲಿ ವಿರೋಧ ಪಕ್ಷದ ನಾಯಕ ವಿ.ಡಿ.ಸತೀಸನ್ ಅವರನ್ನು ಎದುರಿಸಲಿದ್ದಾರೆ.

    ಹಾಲಿ ಶಾಸಕರಾದ ಇ. ಚಂದ್ರಶೇಖರ್, ಸಿ.ಕೆ. ಆಶಾ, ಪಿ. ಬಾಲಚಂದ್ರನ್, ಪಿ.ಎಸ್. ಸುಪಾಲ್, ಚಿತ್ತಾಯಂ ಗೋಪಕುಮಾರ್, ಇ.ಕೆ. ವಿಜಯನ್, ವಿ. ಶಶಿ ಮತ್ತು ಸಿ.ಸಿ. ಮುಕುಂದನ್ ಅವರಿಗೆ ಈ ಬಾರಿ ಟಿಕೆಟ್ ನೀಡಲಾಗಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ಸಿಪಿಐ ಪರ ಐದು ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.

Read More
Next Story