
ಕೇಂದ್ರ ಬಜೆಟ್ 2026: ತೆರಿಗೆದಾರರಿಗೆ ನಿರಾಸೆ; ಆದಾಯ ತೆರಿಗೆ ಮಿತಿ ಬದಲಾವಣೆ ಇಲ್ಲ
1961ರ ಹಳೆಯ ಕಾಯ್ದೆಯನ್ನು ರದ್ದುಪಡಿಸಿ, ಇದೇ ಏಪ್ರಿಲ್ 1ರಿಂದ ನೂತನ 'ಆದಾಯ ತೆರಿಗೆ ಕಾಯ್ದೆ-2025' ಜಾರಿಗೆ ಬರಲಿದೆ. ಇದರಿಂದ ಐಟಿ ರಿಟರ್ನ್ಸ್ ಸಲ್ಲಿಕೆ ಪ್ರಕ್ರಿಯೆ ಮತ್ತಷ್ಟು ಸುಲಭವಾಗಲಿದೆ.
ಬಹುನಿರೀಕ್ಷಿತ 2026ರ ಕೇಂದ್ರ ಬಜೆಟ್ನಲ್ಲಿ ಮಧ್ಯಮ ವರ್ಗದ ವೇತನದಾರರಿಗೆ ನಿರಾಸೆ ಎದುರಾಗಿದೆ. ಆದಾಯ ತೆರಿಗೆ ವಿನಾಯಿತಿ ಮಿತಿ ಅಥವಾ ಸ್ಲ್ಯಾಬ್ಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ತೆರಿಗೆದಾರರಿಗೆ ನಿರೀಕ್ಷಿತ 'ಸಿಹಿ' ಸಿಗದೆ, ಯಥಾಸ್ಥಿತಿ ಮುಂದುವರಿದಂತಾಗಿದೆ.
ತೆರಿಗೆ ಸ್ಲ್ಯಾಬ್ಗಳಲ್ಲಿ ವಿನಾಯಿತಿ ನೀಡದಿದ್ದರೂ, ತೆರಿಗೆ ವ್ಯವಸ್ಥೆಯನ್ನು ಸರಳೀಕರಣಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. 1961ರ ಹಳೆಯ ಕಾಯ್ದೆಯನ್ನು ರದ್ದುಪಡಿಸಿ, ಇದೇ ಏಪ್ರಿಲ್ 1ರಿಂದ ನೂತನ 'ಆದಾಯ ತೆರಿಗೆ ಕಾಯ್ದೆ-2025' ಜಾರಿಗೆ ಬರಲಿದೆ. ಇದರಿಂದ ಐಟಿ ರಿಟರ್ನ್ಸ್ ಸಲ್ಲಿಕೆ ಪ್ರಕ್ರಿಯೆ ಮತ್ತಷ್ಟು ಸುಲಭವಾಗಲಿದೆ.
ತೆರಿಗೆ ಬಾಕಿ ಉಳಿಸಿಕೊಂಡರೆ ಶೇ.100 ದಂಡ!
ಒಂದೆಡೆ ವಿನಾಯಿತಿ ಇಲ್ಲದಿದ್ದರೆ, ಇನ್ನೊಂದೆಡೆ ತೆರಿಗೆ ವಂಚಕರಿಗೆ ಬಜೆಟ್ನಲ್ಲಿ ಬಿಸಿ ಮುಟ್ಟಿಸಲಾಗಿದೆ. ಆದಾಯ ತೆರಿಗೆ ಪಾವತಿಸದೆ ಬಾಕಿ ಉಳಿಸಿಕೊಳ್ಳುವವರಿಗೆ ಶೇ.100 ರಷ್ಟು ದಂಡ ವಿಧಿಸಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ.
ಸ್ವಲ್ಪ ರಿಲೀಫ್ ಎಲ್ಲೆಲ್ಲಿ?
ತೆರಿಗೆ ಸ್ಲ್ಯಾಬ್ ಬದಲಾಗದಿದ್ದರೂ, ಕೆಲವು ಟಿಸಿಎಸ್ (TCS) ದರಗಳಲ್ಲಿ ಕಡಿತ ಮಾಡಿರುವುದು ಸಮಾಧಾನಕರ ಸಂಗತಿ. ವಿದೇಶ ಪ್ರವಾಸಕ್ಕೆ ತೆರಳುವವರಿಗೆ ವಿಧಿಸಲಾಗುತ್ತಿದ್ದ ಟಿಸಿಎಸ್ ದರವನ್ನು ಶೇ. 5ರಿಂದ ಶೇ. 2ಕ್ಕೆ ಇಳಿಸಲಾಗಿದೆ. ಅನಿವಾಸಿ ಭಾರತೀಯರು ಆಸ್ತಿ ಮಾರಾಟ ಮಾಡುವಾಗ ಪಾವತಿಸಬೇಕಿದ್ದ ಟಿಡಿಎಸ್ (TDS) ಅನ್ನು ಶೂನ್ಯಕ್ಕೆ ಇಳಿಸಲಾಗಿದೆ. ಶಿಕ್ಷಣ-ಆರೋಗ್ಯ ಕ್ಷೇತ್ರಗಳಲ್ಲಿಮನ ಟಿಸಿಎಸ್ ಅನ್ನು ಶೇ. 2ರಷ್ಟು ಕಡಿತಗೊಳಿಸಲಾಗಿದೆ. ಮೋಟಾರ್ ವಾಹನ ಅಪಘಾತದ ಕ್ಲೇಮ್ಗಳ ಮೊತ್ತಕ್ಕೆ ಸಂಪೂರ್ಣ ತೆರಿಗೆ ವಿನಾಯಿತಿ ಘೋಷಿಸಲಾಗಿದೆ.
ಐಟಿಆರ್ ಸಲ್ಲಿಕೆಗೆ ಗಡುವು
ಐಟಿಆರ್-1 ಮತ್ತು ಐಟಿಆರ್-2 ಸಲ್ಲಿಸುವ ತೆರಿಗೆದಾರರಿಗೆ ಜುಲೈ 31ರವರೆಗೆ ಕಾಲಾವಕಾಶ ನೀಡಲಾಗಿದೆ. ಇದೇ ವೇಳೆ, ಯುವ ವೃತ್ತಿಪರರು, ಟೆಕ್ಕಿಗಳು ಹೂಡಿಕೆ ಘೋಷಣೆ ಮಾಡಲು ಹಾಗೂ ವಿದೇಶಿ ಆಸ್ತಿ ಘೋಷಣೆ ಮಾಡಲು 6 ತಿಂಗಳ ಹೆಚ್ಚುವರಿ ಕಾಲಾವಕಾಶ ಒದಗಿಸಲಾಗಿದೆ. ಅಲ್ಲದೆ, ಸಣ್ಣಪುಟ್ಟ ತೆರಿಗೆ ಅಪರಾಧಗಳಿಗೆ ಜೈಲು ಶಿಕ್ಷೆಯ ಬದಲಿಗೆ ಇನ್ನು ಮುಂದೆ ದಂಡವನ್ನು ಮಾತ್ರ ವಿಧಿಸಲು ತೀರ್ಮಾನಿಸಲಾಗಿದೆ.

