
ಕೇಂದ್ರ ಬಜೆಟ್ 2026: ಬೆಂಗಳೂರು-ಹೈದರಾಬಾದ್ ಹೈಸ್ಪೀಡ್ ರೈಲು ಘೋಷಣೆ
ಇದು ಉಭಯ ನಗರಗಳ ನಡುವಿನ ಪ್ರಯಾಣದ ಅವಧಿಯನ್ನು ಗಣನೀಯವಾಗಿ ತಗ್ಗಿಸಲಿದೆ. ಈ ಯೋಜನೆಯು ರಾಜ್ಯದ ಪಾಲಿಗೆ ಕೇಂದ್ರದಿಂದ ಸಿಕ್ಕಿರುವ ಮಹತ್ವದ ಕೊಡುಗೆಯಾಗಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ 2026ರ ಸಾಲಿನ ಕೇಂದ್ರ ಬಜೆಟ್ನಲ್ಲಿ ಮೂಲಸೌಕರ್ಯ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿಗೆ ಮಹತ್ವದ ಹೈಸ್ಪೀಡ್ ರೈಲು ಯೋಜನೆಯನ್ನು ಘೋಷಿಸಲಾಗಿದೆ. ದೇಶದ ಅಭಿವೃದ್ಧಿ ವೇಗವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರಮುಖ ಏಳು ನಗರಗಳಲ್ಲಿ ಹೈಸ್ಪೀಡ್ ರೈಲ್ವೆ ಕಾರಿಡಾರ್ಗಳನ್ನು ನಿರ್ಮಿಸುವುದಾಗಿ ಕೇಂದ್ರ ಸರ್ಕಾರ ಪ್ರಕಟಿಸಿದೆ.
ದಕ್ಷಿಣ ಭಾರತದ ಪ್ರಮುಖ ವಾಣಿಜ್ಯ ಹಾಗೂ ಐಟಿ ಹಬ್ಗಳಾದ ಹೈದರಾಬಾದ್ ಮತ್ತು ಬೆಂಗಳೂರು ನಡುವೆ ಹೈಸ್ಪೀಡ್ ರೈಲು ಸಂಚರಿಸಲಿದ್ದು, ಇದು ಉಭಯ ನಗರಗಳ ನಡುವಿನ ಪ್ರಯಾಣದ ಅವಧಿಯನ್ನು ಗಣನೀಯವಾಗಿ ತಗ್ಗಿಸಲಿದೆ. ಈ ಯೋಜನೆಯು ರಾಜ್ಯದ ಪಾಲಿಗೆ ಕೇಂದ್ರದಿಂದ ಸಿಕ್ಕಿರುವ ಮಹತ್ವದ ಕೊಡುಗೆಯಾಗಿದೆ.
ಮುಂಬೈ – ಪುಣೆ, ಪುಣೆ – ಹೈದರಾಬಾದ್, ಹೈದರಾಬಾದ್ – ಬೆಂಗಳೂರು, ಹೈದರಾಬಾದ್ – ಚೆನ್ನೈ, ಚೆನ್ನೈ – ಬೆಂಗಳೂರು, ಬೆಂಗಳೂರು – ವಾರಣಾಸಿ, ವಾರಣಾಸಿ – ಸಿಲಿಗುರಿ ಮಾರ್ಗ ಸೇರಿ ಒಟ್ಟು ಏಳು ರೈಲು ಯೋಜನೆಗಳನ್ನು ಘೋಷಿಸಲಾಗಿದೆ. ಈ ಏಳು ನಗರಗಳಿಗೆ ಅತ್ಯಾಧುನಿಕ ಸಂಪರ್ಕ ಕಲ್ಪಿಸುವುದು ಮತ್ತು ಸಾರಿಗೆ ವ್ಯವಸ್ಥೆಯನ್ನು ಬಲಪಡಿಸುವುದು ಸರ್ಕಾರದ ಪ್ರಮುಖ ಗುರಿಯಾಗಿದೆ.
ಸೆಮಿ ಕಂಡಕ್ಟರ್ ಮಿಷನ್ಗೆ ಕೊಡುಗೆ
ತಂತ್ರಜ್ಞಾನ ವಲಯದಲ್ಲಿ ಸ್ವಾವಲಂಬನೆ ಸಾಧಿಸುವ ಮತ್ತು ಜಾಗತಿಕ ಪೈಪೋಟಿ ಎದುರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು 'ಸೆಮಿಕಂಡಕ್ಟರ್ ಮಿಷನ್ 2.0' ಅನ್ನು ಘೋಷಿಸಿದೆ. ದೇಶೀಯವಾಗಿಯೇ ಸೆಮಿಕಂಡಕ್ಟರ್ ಅಥವಾ ಚಿಪ್ಗಳ ಉತ್ಪಾದನೆಯನ್ನು ಉತ್ತೇಜಿಸಲು ಈ ಮಹತ್ವಾಕಾಂಕ್ಷಿ ಯೋಜನೆಗೆ ಬರೋಬ್ಬರಿ 40,000 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಈ ನಡೆಯು ಎಲೆಕ್ಟ್ರಾನಿಕ್ಸ್ ಉತ್ಪಾದನಾ ವಲಯದಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ನಿರೀಕ್ಷೆಯಿದೆ. ಇದರೊಂದಿಗೆ ಆತ್ಮನಿರ್ಭರ ಭಾರತ ಅಭಿಯಾನಕ್ಕೆ 2,000 ಕೋಟಿ ರೂಪಾಯಿ ಅನುದಾನ ಒದಗಿಸುವ ಮೂಲಕ ಸ್ವದೇಶಿ ಉತ್ಪಾದನೆಗೆ ಬೆಂಬಲ ಮುಂದುವರಿಸಲಾಗಿದೆ.
ಉದ್ಯಮ ವಲಯಕ್ಕೆ ಚೈತನ್ಯ ತುಂಬುವ ನಿಟ್ಟಿನಲ್ಲಿಯೂ ಬಜೆಟ್ನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಶ್ರೇಣಿಯ ಉದ್ಯಮಗಳಿಗೆ (ಎಂಎಸ್ಎಂಇ) ಆರ್ಥಿಕ ಭದ್ರತೆ ಒದಗಿಸಲು 10,000 ಕೋಟಿ ರೂಪಾಯಿ ಮೀಸಲಿಡಲಾಗಿದ್ದು, ಅಗತ್ಯ ಸಾಲದ ನೆರವು ಒದಗಿಸುವ ಭರವಸೆ ನೀಡಲಾಗಿದೆ. ಜವಳಿ ಉದ್ಯಮದ ವಿಸ್ತರಣೆಗಾಗಿ 'ಸಮರ್ಥ್ 2.0' ಯೋಜನೆಯಡಿ ಬೃಹತ್ ಟೆಕ್ಸ್ ಟೈಲ್ ಪಾರ್ಕ್ಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಅಲ್ಲದೆ, ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಲು ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ ಯೋಜನೆಯ ಮೂಲಕ ಖಾದಿ ಮತ್ತು ಗ್ರಾಮೋದ್ಯೋಗಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ.
ಜಲಸಾರಿಗೆ ಮತ್ತು ಕ್ರೀಡಾ ವಲಯಕ್ಕೂ ಬಜೆಟ್ನಲ್ಲಿ ಸ್ಥಾನ ಸಿಕ್ಕಿದೆ. ವಾರಾಣಸಿ ಮತ್ತು ಪಟ್ನಾದಲ್ಲಿ ಹಡಗು ದುರಸ್ತಿ ಕೇಂದ್ರಗಳನ್ನು ಸ್ಥಾಪಿಸುವುದಾಗಿ ಸಚಿವರು ತಿಳಿಸಿದ್ದು, ಇದು ಒಳನಾಡು ಜಲಸಾರಿಗೆಗೆ ಉತ್ತೇಜನ ನೀಡಲಿದೆ. ಕ್ರೀಡಾ ಕ್ಷೇತ್ರದತ್ತಲೂ ಗಮನಹರಿಸಿರುವ ಸರ್ಕಾರ, 'ಭವಿಷ್ಯದ ಚಾಂಪಿಯನ್'ಗಳನ್ನು ರೂಪಿಸಲು 10,000 ಕೋಟಿ ರೂಪಾಯಿಗಳ ಬೃಹತ್ ಅನುದಾನವನ್ನು ಘೋಷಿಸಿದೆ. ಒಟ್ಟಾರೆಯಾಗಿ ಮೂಲಸೌಕರ್ಯ, ತಂತ್ರಜ್ಞಾನ ಮತ್ತು ಉದ್ಯಮ ವಲಯದ ಸಮಗ್ರ ಅಭಿವೃದ್ಧಿಗೆ ಪೂರಕವಾದ ಅಂಶಗಳನ್ನು ಈ ಬಜೆಟ್ ಒಳಗೊಂಡಿದೆ.

