ಲಂಚದ ಆರೋಪಗಳ ಸುಳಿಯಲ್ಲಿ ಸಿದ್ದರಾಮಯ್ಯ ಸರ್ಕಾರ: ಶಾಸಕರಿಂದ ರಾಜೀನಾಮೆ ಬೆದರಿಕೆ
x

ಲಂಚದ ಆರೋಪಗಳ ಸುಳಿಯಲ್ಲಿ ಸಿದ್ದರಾಮಯ್ಯ ಸರ್ಕಾರ: ಶಾಸಕರಿಂದ ರಾಜೀನಾಮೆ ಬೆದರಿಕೆ

"ಬಿ.ಆರ್. ಪಾಟೀಲ್ ಅವರು ಮಾಡಿದ ಭ್ರಷ್ಟಾಚಾರ ಆರೋಪದಲ್ಲಿ ಸತ್ಯಾಂಶವಿದೆ. ಅವರಿಗೆ ನನ್ನ ಸಂಪೂರ್ಣ ಬೆಂಬಲವಿದೆ. ನನ್ನದು ಅಂಥದ್ದೇ ಪರಿಸ್ಥಿತಿಯಿದೆ. ಒಂದು ಕೆಲಸವೂ ಆಗುತ್ತಿಲ್ಲ" ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷರೂ ಆಗಿರುವ ರಾಜು ಕಾಗೆ ತಿಳಿಸಿದ್ದಾರೆ.


ಕರ್ನಾಟಕದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವು ಸ್ವಪಕ್ಷೀಯ ಶಾಸಕರ ಭ್ರಷ್ಟಾಚಾರದ ಆರೋಪಗಳಿಂದಾಗಿ ತೀವ್ರ ಮುಜುಗರಕ್ಕೆ ಸಿಲುಕಿದೆ. ಅದರಲ್ಲೂ ಮುಖ್ಯವಾಗಿ, ವಸತಿ ಇಲಾಖೆಯಲ್ಲಿ ಮನೆ ಹಂಚಿಕೆಗಾಗಿ ಲಂಚ ಪಡೆಯಲಾಗುತ್ತಿದೆ ಎಂಬ ಆಳಂದ ಶಾಸಕ ಬಿ.ಆರ್. ಪಾಟೀಲ್ ಅವರ ಸ್ಫೋಟಕ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಈ ಆರೋಪಗಳು ವಿರೋಧ ಪಕ್ಷಗಳಿಗೆ ಸರ್ಕಾರದ ವಿರುದ್ಧ ಹರಿಹಾಯಲು ಹೊಸ ಅಸ್ತ್ರವನ್ನು ಒದಗಿಸಿವೆ.

ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರೂ ಆಗಿರುವ ಬಿ.ಆರ್. ಪಾಟೀಲ್ ಅವರು ವಸತಿ ಯೋಜನೆಗಳಲ್ಲಿನ ಭ್ರಷ್ಟಾಚಾರದ ಬಗ್ಗೆ ಮಾಡಿರುವ ಆರೋಪಕ್ಕೆ ಕಾಗವಾಡ ಶಾಸಕ ರಾಜು ಕಾಗೆ ಮತ್ತು ಸಾಗರದ ಶಾಸಕ ಬೇಳೂರು ಗೋಪಾಲಕೃಷ್ಣ ಸೇರಿದಂತೆ ಹಲವು ಕಾಂಗ್ರೆಸ್ ಶಾಸಕರು ಬೆಂಬಲ ಸೂಚಿಸಿದ್ದಾರೆ. ಮೊಳಕಾಲ್ಮುರು ಶಾಸಕ ಎನ್.ವೈ. ಗೋಪಾಲಕೃಷ್ಣ ಅವರು "ನನ್ನಿಂದ ಒಂದೂ ಚರಂಡಿ ಕಟ್ಟಿಸಲೂ ಆಗಿಲ್ಲ" ಎಂದು ಆಳಲು ತೋಡಿಕೊಂಡಿರುವುದು ಸರ್ಕಾರದ ಮೇಲಿನ ಅಸಮಾಧಾನಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.

ಸತ್ಯವಿದೆ ಎಂದ ರಾಜು ಕಾಗೆ

"ಬಿ.ಆರ್. ಪಾಟೀಲ್ ಅವರು ಮಾಡಿದ ಭ್ರಷ್ಟಾಚಾರ ಆರೋಪದಲ್ಲಿ ಸತ್ಯಾಂಶವಿದೆ. ಅವರಿಗೆ ನನ್ನ ಸಂಪೂರ್ಣ ಬೆಂಬಲವಿದೆ. ನನ್ನದು ಅಂಥದ್ದೇ ಪರಿಸ್ಥಿತಿಯಿದೆ. ಒಂದು ಕೆಲಸವೂ ಆಗುತ್ತಿಲ್ಲ" ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷರೂ ಆಗಿರುವ ರಾಜು ಕಾಗೆ ತಿಳಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ರಾಜೀನಾಮೆ ನೀಡುವ ಕುರಿತು ನಿರ್ಧರಿಸುವುದಾಗಿಯೂ ಅವರು ಹೇಳಿಕೆ ನೀಡಿದ್ದಾರೆ. ತಮ್ಮ ಕ್ಷೇತ್ರಕ್ಕೆ ಮಂಜೂರಾದ 12 ಕೋಟಿ ರೂಪಾಯಿ ರಸ್ತೆ ಕಾಮಗಾರಿ ಮತ್ತು 13 ಕೋಟಿ ರೂಪಾಯಿಯ ಸಮುದಾಯ ಭವನಗಳ ಯೋಜನೆಗಳಿಗೆ ಇನ್ನೂ ಕಾರ್ಯಾದೇಶ ಸಿಕ್ಕಿಲ್ಲ ಎಂದು ರಾಜು ಕಾಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿ.ಆರ್. ಪಾಟೀಲ್ ಅವರು ರಾಜು ಕಾಗೆ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡು, "ರಾಜು ಕಾಗೆ ಅವರಂತೆ ಬಹಳಷ್ಟು ಮಂದಿ ಮಾತನಾಡುವವರು ಇದ್ದಾರೆ" ಎಂದು ಹೇಳಿದ್ದಾರೆ. ಅಫಜಲಪುರ, ಯಾದಗಿರಿ, ಹೊಸಪೇಟೆಯಿಂದ ಮನೆ ಹಂಚಿಕೆ ಸಂಬಂಧ ನೂರಾರು ಫೋನ್ ಕರೆಗಳು ಬರುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಇನ್ನು, ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ತಮ್ಮ ಕ್ಷೇತ್ರದ ಕೆಲವೆಡೆ ಕೆಆರ್‌ಐಡಿಬಿಎಲ್‌ (ಲ್ಯಾಂಡ್ ಆರ್ಮಿ) ಅಧಿಕಾರಿಗಳು ತಮ್ಮ ಅನುಮತಿಯಿಲ್ಲದೆ ಕಾಮಗಾರಿಗಳನ್ನು ಆರಂಭಿಸುತ್ತಿದ್ದಾರೆ ಎಂದು ದೂರಿದ್ದಾರೆ.

ರಾಜೀನಾಮೆಗೆ ಹೆಚ್ಚಿದ ಆಗ್ರಹ ಮತ್ತು ವಿರೋಧ ಪಕ್ಷಗಳ ವಾಗ್ದಾಳಿ

ಸಾಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಗೋಪಾಲಕೃಷ್ಣ ಬೇಳೂರು ಅವರು, ವಸತಿ ಯೋಜನೆಗಳಲ್ಲಿನ ಲಂಚದ ಆರೋಪ ನಿಜವಾಗಿದ್ದರೆ, "ಸಂಬಂಧಿಸಿದ ಸಚಿವರು ರಾಜೀನಾಮೆ ಕೊಡುವುದು ಒಳ್ಳೆಯದು. ಅದರಲ್ಲಿ ಎರಡು ಮಾತಿಲ್ಲ" ಎಂದು ಆಗ್ರಹಿಸಿದ್ದಾರೆ. "ಯಾರೇ ಇರಲಿ. ಸಂಬಂಧಪಟ್ಟವರು ಯಾರಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಅವರು ರಾಜೀನಾಮೆ ಕೊಟ್ಟು ತನಿಖೆ ಎದುರಿಸಿ ನಿರ್ದೋಷಿಯಾಗಿ ಹೊರಬರುವುದು ಒಳ್ಳೆಯದು. ನಂತರ ಬೇಕಿದ್ದರೆ ಅವರನ್ನು ಸಂಪುಟಕ್ಕೆ ವಾಪಸ್ ತೆಗೆದುಕೊಳ್ಳಲು ಅವಕಾಶವಿರುತ್ತದೆ" ಎಂದು ಹೇಳುವ ಮೂಲಕ ಪರೋಕ್ಷವಾಗಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ರಾಜೀನಾಮೆಗೆ ಆಗ್ರಹಿಸಿದ್ದಾರೆ ಎನ್ನಲಾಗಿದೆ.

ವಿರೋಧ ಪಕ್ಷಗಳ ಟೀಕೆ

ಈ ಆರೋಪಗಳನ್ನು ಸರ್ಕಾರದ ವಿರುದ್ಧ ಅಸ್ತ್ರವಾಗಿ ಬಳಸಿಕೊಂಡಿರುವ ಪ್ರತಿಪಕ್ಷಗಳು, ನೇರ ದಾಳಿಗೆ ಇಳಿದಿವೆ. "ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ಬಡವರ ವಸತಿ ಯೋಜನೆಗಳಲ್ಲೇ 2,100 ಕೋಟಿ ರೂಪಾಯಿ ಕಮಿಷನ್ ಪಡೆದಿದೆ. ಯಾರಿಗೆ ಎಷ್ಟು ಕಮಿಷನ್ ಹೋಗಿದೆ ಎಂಬ ನಿಖರ ಮಾಹಿತಿಯುಳ್ಳ ಪಟ್ಟಿ ನನ್ನ ಬಳಿಯಿದೆ" ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ ಆರೋಪಿಸಿದ್ದಾರೆ.

ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರು "ರಾಜ್ಯ ಸರ್ಕಾರದ ವಿರುದ್ಧ ಅವರದೇ ಪಕ್ಷದ ಶಾಸಕರು ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಬಿ.ಆರ್. ಪಾಟೀಲ್, ರಾಜು ಕಾಗೆ ಅಷ್ಟೇ ಅಲ್ಲ, ಇನ್ನೂ ಹತ್ತಾರು ಶಾಸಕರು ಮಾತನಾಡಲಿದ್ದಾರೆ" ಎಂದು ನುಡಿದಿದ್ದಾರೆ.

ಸರ್ಕಾರದ ಪ್ರತಿಕ್ರಿಯೆ ಮತ್ತು ಹೊಸ ಹಗರಣದ ಆರೋಪ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಈ ಬಗ್ಗೆ ಪ್ರಶ್ನಿಸಿದಾಗ, ಅವರು "ಈ ಬಗ್ಗೆ ರಾಜ್ಯ ನಾಯಕರನ್ನೇ ಕೇಳಿ" ಎಂದು ಹೇಳುವ ಮೂಲಕ ಜವಾಬ್ದಾರಿಯನ್ನು ರಾಜ್ಯ ನಾಯಕತ್ವದತ್ತ ವರ್ಗಾಯಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, "ರಾಜು ಕಾಗೆ ಸೇರಿದಂತೆ ಕೆಲವು ಶಾಸಕರು ಸರ್ಕಾರದ ವಿರುದ್ಧ ಮಾಧ್ಯಮಗಳ ಮೂಲಕ ಅಸಮಾಧಾನ ವ್ಯಕ್ತಪಡಿಸಿರುವ ಬಗ್ಗೆ ಈಗಷ್ಟೇ ಗೊತ್ತಾಗಿದೆ. ಎಲ್ಲ ಶಾಸಕರ ಜತೆ ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು" ಎಂದು ಪ್ರತಿಕ್ರಿಯಿಸಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಅವರು "ಅನಗತ್ಯ ಆರೋಪ ಗೌರವ ತರದು" ಎಂದು ಕಿಡಿ ಕಾರಿದ್ದಾರೆ.

ಇದೇ ವೇಳೆ, ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. "ಅಲ್ಪಸಂಖ್ಯಾತರ ಹೆಸರಿನಲ್ಲಿ ಕರ್ನಾಟಕದ ಕಾಂಗ್ರೆಸ್ ಸರ್ಕಾರವು 625 ಕೋಟಿ ರೂಪಾಯಿ ಗೋಲ್‌ಮಾಲ್ ನಡೆಸಿದೆ. ಅಲ್ಪಸಂಖ್ಯಾತರ ಕೊಳೆಗೇರಿ ಅಭಿವೃದ್ಧಿಯ 398 ಕೋಟಿ ರೂಪಾಯಿ ಯೋಜನೆಗೆ ಹಣಕಾಸು ಇಲಾಖೆ ಆಕ್ಷೇಪ ವ್ಯಕ್ತಪಡಿಸಿದೆ" ಎಂದು ಹೇಳಿದ್ದಾರೆ. ಹಣಕಾಸು ಇಲಾಖೆಯ ಕಾರ್ಯದರ್ಶಿ (ವೆಚ್ಚ) ಬರೆದ ಪತ್ರವನ್ನು ಪ್ರದರ್ಶಿಸಿ ಅವರು ತಮ್ಮ ಆರೋಪಕ್ಕೆ ಪುಷ್ಟಿ ನೀಡಿದ್ದಾರೆ. ಮುಖ್ಯಮಂತ್ರಿ ಹೆಚ್ಚುವರಿ ಮುಖ್ಯದರ್ಶಿಯಾಗಿದ್ದ ನಿವೃತ್ತ ಐಎಎಸ್ ಅಧಿಕಾರಿ ಎಲ್.ಕೆ. ಅತೀಕ್ ಅವರನ್ನು ತೆಗೆದಿರುವುದರ ಹಿಂದಿನ ಉದ್ದೇಶದ ಬಗ್ಗೆಯೂ ಅವರು ಪ್ರಶ್ನಿಸಿದ್ದಾರೆ.

Read More
Next Story