
ರೋಡ್ ರೇಜ್ ಪ್ರಕರಣ: ಅನಂತ್ಕುಮಾರ್ ಹೆಗಡೆಗೆ ಮತ್ತೆ ನೋಟಿಸ್, ಗನ್ಮ್ಯಾನ್ ಮತ್ತು ಚಾಲಕನಿಗೆ ಜಾಮೀನು
ಸೋಂಪುರ ಹೋಬಳಿಯ ಹಾಲೇನಹಳ್ಳಿ ಗ್ರಾಮದ ಸಲ್ಮಾನ್ ಖಾನ್ (30), ಸೈಫ್ ಖಾನ್ (28), ಇಲಿಯಾಸ್ ಖಾನ್ (50) ಮತ್ತು ಗುಲ್ ಷಿರಾ ಉನ್ನೀಸಾ (45) ಎಂಬವರ ಮೇಲೆ ಹಲ್ಲೆ ನಡೆದಿದೆ.
ನೆಲಮಂಗಲ ಸಮೀಪ ನಡೆದ ರೋಡ್ ರೇಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಅನಂತ್ಕುಮಾರ್ ಹೆಗಡೆ ಅವರಿಗೆ ದಾಬಸ್ಪೇಟೆ ಪೊಲೀಸರು ಮತ್ತೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.
ಈ ಹಿಂದೆ ಒಂದು ಸುತ್ತಿನ ವಿಚಾರಣೆ ನಡೆಸಿ ಕಳುಹಿಸಿದ್ದ ಪೊಲೀಸರು, ಇದೀಗ ಎರಡನೇ ಬಾರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಪ್ರಕರಣದಲ್ಲಿ ಆರೋಪಿಗಳನ್ನು ಬಿಟ್ಟು ಕಳಿಸಲಾಗಿದೆ ಎಂದು ಸ್ಥಳೀಯರು ಸೇರಿದಂತೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಹಳೆ ನಿಜಗಲ್ ಬಳಿ ಕಾರುಗಳ ಓವರ್ಟೇಕ್ ವಿಚಾರದಲ್ಲಿ ಗಲಾಟೆ ನಡೆದಿತ್ತು. ಅನಂತ್ಕುಮಾರ್ ಹೆಗಡೆ ಅವರು ಪ್ರಯಾಣಿಸುತ್ತಿದ್ದ ಕಾರನ್ನು ಓವರ್ಟೇಕ್ ಮಾಡಲಾಯಿತು ಎಂಬ ಕಾರಣಕ್ಕೆ ಇನ್ನೋವಾ ಕಾರಿನಲ್ಲಿದ್ದ ನಾಲ್ವರ ಮೇಲೆ ಹಲ್ಲೆ ಮತ್ತು ಗೂಂಡಾಗಿರಿ ನಡೆದಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಕೇಂದ್ರದ ಮಾಜಿ ಸಚಿವ, ಉತ್ತರ ಕನ್ನಡ ಕ್ಷೇತ್ರದ ಮಾಜಿ ಸಂಸದ ಅನಂತ್ಕುಮಾರ್ ಹೆಗಡೆ, ಅವರ ಪುತ್ರ ಅಶುತೋಷ್, ಕಾರು ಚಾಲಕ ಮಹೇಶ್ ಮತ್ತು ಗನ್ಮ್ಯಾನ್ ಶ್ರೀಧರ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು.
ಹಲ್ಲೆಗೊಳಗಾದವರು
ಸೋಂಪುರ ಹೋಬಳಿಯ ಹಾಲೇನಹಳ್ಳಿ ಗ್ರಾಮದ ಸಲ್ಮಾನ್ ಖಾನ್ (30), ಸೈಫ್ ಖಾನ್ (28), ಇಲಿಯಾಸ್ ಖಾನ್ (50) ಮತ್ತು ಗುಲ್ ಷಿರಾ ಉನ್ನೀಸಾ (45) ಎಂಬವರ ಮೇಲೆ ಹಲ್ಲೆ ನಡೆದಿದ್ದು, ಅವರು ದಾಬಸ್ಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗನ್ಮ್ಯಾನ್, ಚಾಲಕನಿಗೆ ಜಾಮೀನು
ಈ ಪ್ರಕರಣದಲ್ಲಿ ಬಂಧಿಸಲಾಗಿದ್ದ ಅನಂತ್ಕುಮಾರ್ ಹೆಗಡೆ ಅವರ ಗನ್ಮ್ಯಾನ್ ಶ್ರೀಧರ್ ಮತ್ತು ಕಾರು ಚಾಲಕ ಮಹೇಶ್ಗೆ ನೆಲಮಂಗಲ ಜೆಎಂಎಫ್ಸಿ ನ್ಯಾಯಾಲಯದಿಂದ ಷರತ್ತುಬದ್ಧ ಜಾಮೀನು ದೊರೆತಿದೆ.