
ಐಶ್ವರ್ಯಗೌಡ ಚಿನ್ನ ವಂಚನೆ ಪ್ರಕರಣ: ಸತತ ಏಳು ತಾಸು ಇಡಿ ವಿಚಾರಣೆ ಎದುರಿಸಿದ ಡಿ.ಕೆ.ಸುರೇಶ್
ಐಶ್ವರ್ಯಗೌಡಳಿಗೂ, ಡಿ.ಕೆ.ಸುರೇಶ್ಗೂ ಇರುವ ನಂಟಿನ ಬಗ್ಗೆ ಇಡಿ ಅಧಿಕಾರಿಗಳು ಪ್ರಶ್ನಿಸಿದ್ದಾರೆ. ಆಕೆಯ ವಂಚನೆಯ ಬಗ್ಗೆ ಮಾಹಿತಿ ಇರಲಿಲ್ಲವೇ ಎಂಬುದರ ಕುರಿತು ಕೇಳಲಾಗಿದೆ.
ಐಶ್ವರ್ಯಗೌಡ ಕೋಟ್ಯಂತರ ರು. ಮೌಲ್ಯದ ಚಿನ್ನದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಮತ್ತು ಬಬೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಜಾರಿ ನಿರ್ದೇಶನಾಲಯ (ಇಡಿ) ಮುಂದೆ ಸುಮಾರು ಏಳು ತಾಸುಗಳ ಕಾಲ ವಿಚಾರಣೆ ಎದುರಿಸಿದರು.
ಡಿ.ಕೆ.ಸುರೇಶ್ ವಿಚಾರಣೆಗೆ ಹಾಜರಾದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ತಮ್ಮ ಸಹೋದರಿ ಎಂದು ಹೇಳಿಕೊಂಡು ಕೋಟ್ಯಂತರ ರು. ಮೌಲ್ಯದ ಚಿನ್ನದ ವಂಚನೆ ಮಾಡಿದ ಆರೋಪದ ಮೇರೆಗೆ ಇಡಿ ಅಧಿಕಾರಿಗಳು ಡಿ.ಕೆ.ಸುರೇಶ್ಗೆ ನೊಟೀಸ್ ಜಾರಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಡಿ.ಕೆ.ಸುರೇಶ್ ವಿಚಾರಣೆಗೆ ಹಾಜರಾಗಿದ್ದರು. ಸೋಮವಾರ (ಜೂ.23) ಬೆಳಗ್ಗೆ 11ರಿಂದ ಸಂಜೆ 6ರವರೆಗೆ ಅಧಿಕಾರಿಗಳು ವಿಚಾರಣೆ ನಡೆಸಿದರು.
ವಿಚಾರಣೆ ವೇಳೆ ಐಶ್ವರ್ಯಗೌಡಳಿಗೂ, ಡಿ.ಕೆ.ಸುರೇಶ್ಗೂ ಇರುವ ನಂಟಿನ ಬಗ್ಗೆ ಪ್ರಶ್ನಿಸಲಾಗಿದೆ. ಅಲ್ಲದೇ, ಆಕೆಯ ಪರಿಚಯ ಹೇಗಾಯಿತು? ಎಂಬುದರ ವಿಚಾರಣೆ ನಡೆಸಲಾಗಿದೆ. ತಮ್ಮ ಹೆಸರು ಹೇಳಿಕೊಂಡು ಕೋಟ್ಯಂತರ ರು. ಮೌಲ್ಯದ ಚಿನ್ನ ವಂಚನೆ ಮಾಡಿರುವ ಬಗ್ಗೆ ತಮಗೆ ಮಾಹಿತಿ ಇರಲಿಲ್ಲವೇ? ಅಲ್ಲದೇ, ಇತರೆ ರಾಜಕಾರಣಿಗಳೊಂದಿಗೆ ನಂಟಿರುವ ಬಗ್ಗೆ ವಿಷಯ ತಿಳಿದಿರಲಿಲ್ಲವೇ? ತಮ್ಮ ಹೆಸರು ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ತಿಳಿದಿರಲಿಲ್ಲವೇ? ಇತ್ಯಾದಿಗಳ ಕುರಿತು ಪ್ರಶ್ನಿಸಿ ಉತ್ತರ ಪಡೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ವಿಚಾರಣೆ ಮುಗಿಸಿದ ಬಳಿಕ ಮಾತನಾಡಿದ ಡಿ.ಕೆ.ಸುರೇಶ್, ತನಿಖಾಧಿಕಾರಿಗಳು ಕೇಳಿದ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ತನಿಖೆಗೆ ಸಂಪೂರ್ಣ ಸಹಕರಿಸಿದ್ದೇನೆ. ಐಶ್ವರ್ಯಗೌಡ ಅವರು ನನ್ನ ಹೆಸರು ದುರ್ಬಳಕೆ ಮಾಡಿಕೊಂಡಿದ್ದಾರೆ. ನನ್ನ ಜೊತೆ ಪರಿಚಯವಿದೆ ಎಂದು ನಂಬಿ ಕೆಲವರು ಹಣ ನೀಡಿ ವಂಚನೆಗೊಳಗಾಗಿದ್ದಾರೆ. ಒಮ್ಮೆ ಕನ್ನಡ ರಾಜೋತ್ಸವ ಮಾತ್ರ ಕರೆದಿದ್ದು, ನಾನು ಹೋಗಿದ್ದೆ. ಆದರೆ ಆಕೆಯೊಂದಿಗೆ ನೇರ ಮಾತಿನ ವ್ಯವಹಾರ ಆಗಿರಲಿಲ್ಲ. ಪ್ರಕರಣ ಸಂಬಂಧ ಜುಲೈ 7ರಂದು ಮತ್ತೊಮ್ಮೆ ವಿಚಾರಣೆಗೆ ಕರೆದಿದ್ದು, ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ.
ಏನಿದು ಪ್ರಕರಣ?
ಐಶ್ವರ್ಯಾ ಗೌಡ ಎಂಬುವರು ಮಾಜಿ ಸಂಸದ ಡಿ.ಕೆ. ಸುರೇಶ್ ಅವರ ಸಹೋದರಿ ಎಂದು ಹೇಳಿಕೊಂಡು ಅನೇಕರಿಗೆ ವಂಚಿಸಿದ್ದಾರೆ ಎಂಬ ಆರೋಪ ಇದೆ. ಅಷ್ಟೇ ಅಲ್ಲದೆ, ಅನೇಕ ರಾಜಕೀಯ ನಾಯಕರ ಪರಿಚಯವಿದೆ ಎಂದು ನಂಬಿಸಿ ಹಲವು ಚಿನ್ನದ ವ್ಯಾಪಾರಿಗಳಿಗೆ, ಉದ್ಯಮಿಗಳಿಗೆ ಮೋಸ ಮಾಡಿದ್ದಾರೆ ಎಂಬುವುದು ಆರೋಪವಾಗಿದೆ. ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಚಿನ್ನದಂಗಡಿಯ ಮಾಲಕಿ ವನಿತಾ ಎಸ್. ಐತಾಳ್ ಎಂಬುವವರು ಈ ಬಗ್ಗೆ ದೂರು ನೀಡಿದ್ದರು. ಐಶ್ವರ್ಯಾ ಗೌಡ ಅವರು ಸಾಲದ ರೂಪದಲ್ಲಿ ಸುಮಾರು 9.82 ಕೋಟಿ ರೂ. ಮೌಲ್ಯದ ಚಿನ್ನವನ್ನು ಪಡೆದು ವಂಚಿಸಿದ್ದಾರೆ ಎಂದು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದರು.
ಕೋಟ್ಯಂತರ ರು. ಅವ್ಯವಹಾರ ಹಿನ್ನೆಲೆಯಲ್ಲಿ ಇಡಿ ಪ್ರಕರಣದಲ್ಲಿ ಪ್ರವೇಶಿಸಿ ತನಿಖೆ ಕೈಗೊಂಡಿತ್ತು. ಐಶ್ವರ್ಯಾಗೌಡ ಆರೋಪ ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ಆಕೆಯನ್ನುಬಂಧಿಸಿ ತೀವ್ರ ವಿಚಾರಣೆಗೊಳಪಡಿಸಲಾಗಿತ್ತು. ವಿಚಾರಣೆ ವೇಳೆ ಐಶ್ವರ್ಯಾಗೌಡ ನೀಡಿದ ಮಾಹಿತಿ ಮೇರೆಗೆ ಡಿ.ಕೆ.ಸುರೇಶ್ಗೆ ನೊಟೀಸ್ ನೀಡಿದ ಇಡಿ ಅಧಿಕಾರಿಗಳು ವಿಚಾರಣೆ ನಡೆಸಿ ಮಾಹಿತಿ ಕ್ರೋಢೀಕರಿಸಿದ್ದಾರೆ.
ಆಸ್ತಿ ಜಪ್ತಿ
ಮಾಜಿ ಸಂಸದ ಡಿ.ಕೆ.ಸುರೇಶ್ ಸಹೋದರಿ ಎಂದು ಸುಳ್ಳು ಹೇಳಿ ಚಿನ್ನದ ವ್ಯಾಪಾರಿಗಳು ಹಾಗೂ ಇನ್ನಿತರ ವ್ಯಕ್ತಿಗಳಿಗೆ ವಂಚಿಸಿದ ಪ್ರಕರಣದ ಪ್ರಮುಖ ಆರೋಪಿ ಐಶ್ವರ್ಯಾಗೌಡಳಿಗೆ ಸೇರಿದ ಒಟ್ಟು 3.98 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಮುಟ್ಟುಗೋಲು ಹಾಕಿಕೊಂಡಿದೆ.
ಅಕ್ರಮ ಹಣ ವರ್ಗಾವಣೆ ಆರೋಪದಡಿ ಐಶ್ವರ್ಯಾಗೌಡ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಇ.ಡಿ. ತನ್ನ ತನಿಖೆಯಲ್ಲಿ ಅಕ್ರಮವಾಗಿ ಹಣ ವರ್ಗಾವಣೆ ಮಾಡಿರುವುದು ಕಂಡುಬಂದಿತ್ತು. ವಂಚನೆ ಕೃತ್ಯಕ್ಕೆ ಪತಿ ಹರೀಶ್ ಭಾಗಿಯಾಗಿರುವುದು ಗೊತ್ತಾಗಿತ್ತು. ಈ ನಿಟ್ಟಿನಲ್ಲಿ ವಾಮಮಾರ್ಗದಲ್ಲಿ ಸಂಪಾದಿಸಿದ್ದ 2.01 ಕೋಟಿ ಮೌಲ್ಯದ ಪ್ಲ್ಯಾಟ್, ನಿವೇಶನಗಳು ಹಾಗೂ ನಿರ್ಮಾಣವಾಗಿರುವ ಕಟ್ಟಡ ಹಾಗೂ 1.97 ಕೋಟಿ ರೂ.ಮೊತ್ತದ ಹಣ ಹಾಗೂ ವಾಹನಗಳು ಒಳಗೊಂಡಂತೆ ಒಟ್ಟು 3.98 ಕೋಟಿ ಮೌಲ್ಯದ ಚರಾಸ್ತಿ ಹಾಗೂ ಸ್ಥಿರಾಸ್ತಿ ವಶಕ್ಕೆ ಪಡೆಯಲಾಗಿದೆ ಎಂದು ಇಡಿ ತಿಳಿಸಿದೆ.
ವಂಚನೆ ಸಂಬಂಧ ಬೆಂಗಳೂರು ನಗರ ಹಾಗೂ ಮಂಡ್ಯ ಜಿಲ್ಲೆಯಲ್ಲಿ 6ಕ್ಕಿಂತ ಹೆಚ್ಚು ಪ್ರಕರಣ ದಾಖಲಾಗಿದ್ದವು. ಪೂರ್ವಾಸಂಚು ರೂಪಿಸಿ ಚಿನ್ನದ ವ್ಯಾಪಾರಿಗಳು ಹಾಗೂ ಇನ್ನಿತರರಿಂದ ಹೆಚ್ಚಿನ ಹಣದ ಆಮಿಷವೊಡ್ಡಿ ಕೋಟ್ಯಂತರ ರೂ. ನಗದು ಹಾಗೂ ಚಿನ್ನಾಭರಣ ಪಡೆಯುತ್ತಿದ್ದರು. ಬಳಿಕ ಹಣ ನೀಡುವಂತೆ ದೂರುದಾರರು ಪ್ರಶ್ನಿಸಿದಾಗ ರಾಜಕೀಯ ನಾಯಕರ ಪ್ರಭಾವ ಬಳಸಿ ಐಶ್ವರ್ಯಗೌಡ ದಂಪತಿ ಧಮಕಿ ಹಾಕುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ