LIVE Todays live news Mar 14th: ಕೊಚ್ಚಿಯಲ್ಲಿದ್ದ ಇರಾನ್ ನೌಕೆಯ ಸಿಬ್ಬಂದಿಯನ್ನು ಸ್ವದೇಶಕ್ಕೆ ಕಳುಹಿಸಿದ ಭಾರತ
x
ಕೊಚ್ಚಿಯಲ್ಲಿರುವ ಇರಾನ್‌ ನೌಕೆ

Today's live news Mar 14th: ಕೊಚ್ಚಿಯಲ್ಲಿದ್ದ ಇರಾನ್ ನೌಕೆಯ ಸಿಬ್ಬಂದಿಯನ್ನು ಸ್ವದೇಶಕ್ಕೆ ಕಳುಹಿಸಿದ ಭಾರತ

ರಾಜ್ಯ, ಭಾರತ ಮತ್ತು ಜಗತ್ತಿನಾದ್ಯಂತ ನಡೆಯುತ್ತಿರುವ ಅತ್ಯಂತ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ನೋಟ ಇಲ್ಲಿದೆ.


Click the Play button to hear this message in audio format

ಇಂದು ಶನಿವಾರ ಮಾರ್ಚ್ 14, 2026. ಭಾರತದ ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ವಲಯಗಳಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಇಂದಿನ ಪಮುಖ ಮತ್ತು ಟ್ರೆಂಡಿಂಗ್ ಸುದ್ದಿಗಳ ಸಮಗ್ರ ನೋಟ ಇಲ್ಲಿದ

Live Updates

  • 14 March 2026 3:40 PM IST

    ಕೊಚ್ಚಿಯಲ್ಲಿದ್ದ ಇರಾನ್ ನೌಕೆಯ ಸಿಬ್ಬಂದಿಯನ್ನು ಸ್ವದೇಶಕ್ಕೆ ಕಳುಹಿಸಿದ ಭಾರತ

    ಇರಾನ್ ಮತ್ತು ಅಮೆರಿಕ ನಡುವೆ ಸೇನಾ ಸಂಘರ್ಷ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ತಾಂತ್ರಿಕ ಕಾರಣಗಳಿಂದ ಕೊಚ್ಚಿ ಬಂದರಿನಲ್ಲಿ ತಂಗಿದ್ದ ಇರಾನ್ ಯುದ್ಧನೌಕೆ 'ಐಆರ್‌ಐಎಸ್ ಲಾವನ್'ನ  ಸಿಬ್ಬಂದಿಯನ್ನು ಭಾರತ ಸರ್ಕಾರ ಶನಿವಾರ (ಮಾರ್ಚ್ 14) ಅವರ ದೇಶಕ್ಕೆ ಕಳುಹಿಸಿಕೊಟ್ಟಿದೆ. ಒಟ್ಟು 183 ಸಿಬ್ಬಂದಿಗಳ ಪೈಕಿ 100ಕ್ಕೂ ಹೆಚ್ಚು ಮಂದಿ ಕೊಚ್ಚಿ ವಿಮಾನ ನಿಲ್ದಾಣದಿಂದ ಟರ್ಕಿಶ್ ಏರ್ ಲೈನ್ಸ್ ವಿಮಾನದ ಮೂಲಕ ತೆರಳಿದ್ದಾರೆ. ಈ ವಿಮಾನವು ಮೊದಲು ಕೊಲಂಬೋಗೆ ತೆರಳಿ, ಅಲ್ಲಿ ಮಾರ್ಚ್ 4ರಂದು ಅಮೆರಿಕದ ಜಲಂತರ್ಗಾಮಿ ದಾಳಿಯಿಂದ ಮುಳುಗಡೆಯಾದ ಮತ್ತೊಂದು ಇರಾನ್ ನೌಕೆ 'ಐಆರ್‌ಐಎಸ್ ದೇನಾ'ದ 80ಕ್ಕೂ ಹೆಚ್ಚು ನಾವಿಕರ ಮೃತದೇಹಗಳನ್ನು ಹೊತ್ತು ತಂದಿತ್ತು.

    ಪ್ರಸ್ತುತ 'ಐಆರ್‌ಐಎಸ್ ಲಾವನ್' ನೌಕೆಯ ನಿರ್ವಹಣೆಗಾಗಿ ಸುಮಾರು 50 ಸಿಬ್ಬಂದಿಗಳು ಮಾತ್ರ ಕೊಚ್ಚಿಯಲ್ಲೇ ಉಳಿದುಕೊಂಡಿದ್ದಾರೆ. ತೆರಳಿದ ನಾವಿಕರು ಅರ್ಮೇನಿಯಾದ ರಾಜಧಾನಿ ಯೆರೆವಾನ್ ತಲುಪಿ, ಅಲ್ಲಿಂದ ರಸ್ತೆ ಮಾರ್ಗದ ಮೂಲಕ ಇರಾನ್ ಸೇರಲಿದ್ದಾರೆ. ತಾಂತ್ರಿಕ ಸಮಸ್ಯೆಯಿಂದಾಗಿ ಈ ನೌಕೆಯು ಮಾರ್ಚ್ 4ರಂದು ಕೊಚ್ಚಿ ಬಂದರಿಗೆ ಆಗಮಿಸಿತ್ತು. ಇರಾನ್‌ನ ವಿನಂತಿಯ ಮೇರೆಗೆ ಭಾರತವು ತುರ್ತು ಡಾಕಿಂಗ್‌ಗೆ ಅವಕಾಶ ನೀಡಿತ್ತು.

    ರಾಜತಾಂತ್ರಿಕ ಪ್ರಯತ್ನ

    ಪಶ್ಚಿಮ ಏಷ್ಯಾದ ಬಿಕ್ಕಟ್ಟಿನ ನಡುವೆ ಹಾರ್ಮುಜ್ ಜಲಸಂಧಿಯ ಎರಡೂ ಬದಿಗಳಲ್ಲಿರುವ ಎರಡು ಡಜನ್‌ಗೂ ಹೆಚ್ಚು ಭಾರತೀಯ ವ್ಯಾಪಾರಿ ಹಡಗುಗಳ ಸುರಕ್ಷಿತ ಸಂಚಾರವನ್ನು ಖಚಿತಪಡಿಸಿಕೊಳ್ಳಲು ನವದೆಹಲಿ ಶ್ರಮಿಸುತ್ತಿದೆ. ಇದೇ ವಿಷಯವಾಗಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಇರಾನ್ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರಾಗ್ಚಿ ಅವರೊಂದಿಗೆ ಗುರುವಾರ ರಾತ್ರಿ ಮಾತನಾಡಿದ್ದಾರೆ. ಇದು ಯುದ್ಧ ಆರಂಭವಾದ ನಂತರ ಇಬ್ಬರು ನಾಯಕರ ನಡುವೆ ನಡೆದ ನಾಲ್ಕನೇ ದೂರವಾಣಿ ಸಂಭಾಷಣೆಯಾಗಿದೆ.

  • 14 March 2026 3:37 PM IST

    ಕೆ. ಸುಧಾಕರನ್ ಅವರಿಗೆ ಬಿಜೆಪಿಗೆ ಆಹ್ವಾನ ನೀಡಿದ ಪದ್ಮಜಾ ವೇಣುಗೋಪಾಲ್

    ಕಾಂಗ್ರೆಸ್‌ನ ಹಿರಿಯ ನಾಯಕ ಮತ್ತು ಕಣ್ಣೂರು ಸಂಸದ ಕೆ. ಸುಧಾಕರನ್ ಅವರಿಗೆ ಬಿಜೆಪಿ ನಾಯಕಿ ಪದ್ಮಜಾ ವೇಣುಗೋಪಾಲ್ ಅವರು ಶನಿವಾರ (ಮಾರ್ಚ್ 14) ಬಿಜೆಪಿ ಸೇರುವಂತೆ ಬಹಿರಂಗ ಆಹ್ವಾನ ನೀಡಿದ್ದಾರೆ. ಹಾಲಿ ಸಂಸದರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡದಿರುವ ಕಾಂಗ್ರೆಸ್ ನಿರ್ಧಾರದಿಂದ ಸುಧಾಕರನ್ ಅತೃಪ್ತರಾಗಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಕಾಂಗ್ರೆಸ್ ದೈತ್ಯ ನಾಯಕ ಕೆ. ಕರುಣಾಕರನ್ ಅವರ ಪುತ್ರಿಯಾಗಿರುವ ಪದ್ಮಜಾ, "ಕಾಂಗ್ರೆಸ್ ತನ್ನನ್ನು ಮೂಲೆಗುಂಪು ಮಾಡಿದಂತೆಯೇ ಸುಧಾಕರನ್ ಅವರನ್ನೂ ನಡೆಸಿಕೊಳ್ಳುತ್ತಿರುವುದು ನನಗೇನೂ ಆಶ್ಚರ್ಯ ತಂದಿಲ್ಲ" ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. ಸುಧಾಕರನ್ ಅವರಂತಹ ನಾಯಕರು ಬಿಜೆಪಿ ಸೇರುವುದು ಇಂದಿನ ಅಗತ್ಯವಾಗಿದ್ದು, ಅವರು ಎಲ್ಲಿಗೆ ಹೋದರೂ ಅವರಿಗೆ ಸ್ಪರ್ಧಿಸಲು ಸೀಟು ಸಿಗಲಿದೆ ಮತ್ತು ಅವರು ಎಂದಿಗೂ ಬೆಂಬಲವಿಲ್ಲದೆ ಉಳಿಯುವುದಿಲ್ಲ ಎಂದು ಪದ್ಮಜಾ ಖಾಸಗಿ ಸುದ್ದಿ ವಾಹಿನಿಯೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ.

  • 14 March 2026 1:36 PM IST

    ಹಾರ್ಮುಜ್ ಜಲಸಂಧಿಯನ್ನು ಯಶಸ್ವಿಯಾಗಿ ದಾಟಿದ ಮತ್ತೊಂದು ಎಲ್‌ಪಿಜಿ ನೌಕೆ

    ಭಾರತದ ಎರಡನೇ ಎಲ್‌ಪಿಜಿ (LPG) ವಾಹಕ ನೌಕೆ 'ನಂದಾದೇವಿ' ಸಂಘರ್ಷದ ಪರಿಸ್ಥಿತಿ ಇರುವ ಹಾರ್ಮುಜ್ ಜಲಸಂಧಿಯನ್ನು ಯಶಸ್ವಿಯಾಗಿ ದಾಟಿ ಮುಕ್ತ ಸಮುದ್ರವನ್ನು ಪ್ರವೇಶಿಸಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಕೊಲ್ಲಿ ಪ್ರದೇಶದಲ್ಲಿ ಉದ್ವಿಗ್ನತೆಯ ನಡುವೆಯೂ ತನ್ನ ಇಂಧನ ಸರಕುಗಳನ್ನು ಸುರಕ್ಷಿತವಾಗಿ ಸಾಗಿಸುವ ಭಾರತದ ಪ್ರಯತ್ನಗಳಲ್ಲಿ ಇದು ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ.

  • 14 March 2026 10:52 AM IST

    24 ಗಂಟೆಯಲ್ಲಿ ದುಬೈ ಮೇಲೆ 2ನೇ ಬಾರಿ ಪ್ರಹಾರ; ಕಟ್ಟಡ ಜಖಂ

    ಅಮೆರಿಕ-ಇಸ್ರೇಲ್-ಇರಾನ್ ನಡುವಿನ ಯುದ್ಧವು 15ನೇ ದಿನಕ್ಕೆ ಕಾಲಿಟ್ಟಿದ್ದು, ಕಳೆದ 24 ಗಂಟೆಗಳಲ್ಲಿ ದುಬೈ ಮೇಲೆ ನಡೆದ ಎರಡನೇ ದಾಳಿಯಲ್ಲಿ ಅಲ್ಲಿನ ಹಣಕಾಸು ಕೇಂದ್ರದ ಕಟ್ಟಡವೊಂದಕ್ಕೆ ಹಾನಿಯಾಗಿದೆ. ಅಕಾಶದಲ್ಲೇ ತಡೆಹಿಡಿಯಲಾದ ಕ್ಷಿಪಣಿ ಅಥವಾ ಡ್ರೋನ್‌ನ ಅವಶೇಷಗಳು ದುಬೈನ ಕೇಂದ್ರ ಭಾಗದಲ್ಲಿರುವ ಕಟ್ಟಡದ ಮುಂಭಾಗಕ್ಕೆ ಅಪ್ಪಳಿಸಿವೆ. ಈ ಘಟನೆಯಿಂದ ಯಾವುದೇ ಬೆಂಕಿ ಅನಾಹುತ ಸಂಭವಿಸಿಲ್ಲ ಮತ್ತು ಯಾರಿಗೂ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

  • 14 March 2026 9:13 AM IST

    ಸೌದಿ ಅರೇಬಿಯಾದ ಅಮೆರಿಕ ಸೇನಾ ನೆಲೆ ಮೇಲೆ ಇರಾನ್ ಕ್ಷಿಪಣಿ ದಾಳಿ

    ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ಮತ್ತಷ್ಟು ಉಲ್ಬಣಗೊಂಡಿದ್ದು, ಸೌದಿ ಅರೇಬಿಯಾದಲ್ಲಿರುವ ಅಮೆರಿಕದ ಸೇನಾ ನೆಲೆಯ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ಸೌದಿ ಅರೇಬಿಯಾದ ಪ್ರಿನ್ಸ್ ಸುಲ್ತಾನ್ ಏರ್ ಬೇಸ್ (Prince Sultan Air Base) ಮೇಲೆ ನಡೆದ ಈ ದಾಳಿಯಲ್ಲಿ ಅಮೆರಿಕ ವಾಯುಪಡೆಗೆ ಸೇರಿದ ಐದು KC-135 ಟ್ಯಾಂಕರ್ ವಿಮಾನಗಳು ಹಾನಿಗೊಳಗಾಗಿವೆ ಎಂದು ಅಮೆರಿಕದ ಅಧಿಕಾರಿಗಳು 'ವಾಲ್ ಸ್ಟ್ರೀಟ್ ಜರ್ನಲ್'ಗೆ ಖಚಿತಪಡಿಸಿದ್ದಾರೆ. ಯುದ್ಧ ವಿಮಾನಗಳಿಗೆ ಇಂಧನ ತುಂಬಲು ಬಳಸಲಾಗುವ ಈ ಪ್ರಮುಖ ವಿಮಾನಗಳು ನೆಲದ ಮೇಲಿದ್ದಾಗ ದಾಳಿಗೆ ತುತ್ತಾಗಿವೆ. ಹಾನಿಗೊಳಗಾದ ವಿಮಾನಗಳನ್ನು ಶೀಘ್ರದಲ್ಲೇ ದುರಸ್ತಿಗೊಳಿಸಿ ಮತ್ತೆ ಸೇವೆಗೆ ನಿಯೋಜಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • 14 March 2026 7:35 AM IST

    ಮಧ್ಯಪ್ರಾಚ್ಯಕ್ಕೆ 2,500 ಮರೀನ್ ಕಮಾಂಡೋಗಳನ್ನು ರವಾನಿಸಿದ ಅಮೆರಿಕ!

    ಇರಾನ್ ವಿರುದ್ಧದ ಯುದ್ಧವು ಎರಡನೇ ವಾರಕ್ಕೆ ಕಾಲಿಟ್ಟ ಬೆನ್ನಲ್ಲೇ, ಅಮೆರಿಕವು ಮಧ್ಯಪ್ರಾಚ್ಯಕ್ಕೆ ತನ್ನ ಸೇನಾ ಬಲವನ್ನು ಮತ್ತಷ್ಟು ಹೆಚ್ಚಿಸಿದೆ. ಶುಕ್ರವಾರ ಅಮೆರಿಕದ ಸೇನಾ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಸುಮಾರು 2,500 ಮರೀನ್ ಕಮಾಂಡೋಗಳು ಮತ್ತು ಒಂದು ಬೃಹತ್ ಆಂಫಿಬಿಯಸ್ ಅಸಾಲ್ಟ್ ಶಿಪ್ (Amphibious Assault Ship - ಸಮುದ್ರ ಮತ್ತು ಭೂಮಿ ಎರಡರಲ್ಲೂ ದಾಳಿ ಮಾಡುವ ಸಾಮರ್ಥ್ಯವಿರುವ ಯುದ್ಧನೌಕೆ) ಅನ್ನು ಮಧ್ಯಪ್ರಾಚ್ಯದತ್ತ ರವಾನಿಸಲು ಆದೇಶಿಸಲಾಗಿದೆ. ಇರಾನ್‌ನೊಂದಿಗಿನ ಸಂಘರ್ಷ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಮಹತ್ವದ ಸೇನಾ ನಿಯೋಜನೆ ನಡೆದಿದೆ.

  • 14 March 2026 7:32 AM IST

    ಇರಾನ್‌ನ ಪ್ರಮುಖ ತೈಲ ರಫ್ತು ಕೇಂದ್ರ 'ಖಾರ್ಗ್ ದ್ವೀಪ'ದ ಮೇಲೆ ಅಮೆರಿಕ ದಾಳಿ!

    ಇರಾನ್‌ನ ತೈಲ ರಫ್ತಿನ ಪ್ರಮುಖ ಕೇಂದ್ರವಾದ ಖಾರ್ಗ್ ದ್ವೀಪದಲ್ಲಿನ (Kharg Island) ಸೇನಾ ನೆಲೆಗಳನ್ನು ಅಮೆರಿಕದ ಪಡೆಗಳು "ಸಂಪೂರ್ಣವಾಗಿ ನಾಶಪಡಿಸಿವೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಘೋಷಿಸಿದ್ದಾರೆ. ಪರ್ಷಿಯನ್ ಕೊಲ್ಲಿಯಲ್ಲಿರುವ ಈ ಸಣ್ಣ ದ್ವೀಪವು ಇರಾನ್‌ನ ತೈಲ ರಫ್ತಿನ ಪ್ರಮುಖ ಕೇಂದ್ರವಾಗಿದ್ದು, ಮುಂದಿನ ದಿನಗಳಲ್ಲಿ ಇಲ್ಲಿನ ತೈಲ ಮೂಲಸೌಕರ್ಯಗಳ ಮೇಲೆಯೇ ದಾಳಿ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ವಾರಾಂತ್ಯದ ರಜೆಗಾಗಿ ಫ್ಲೋರಿಡಾಗೆ ತೆರಳುವ ಮುನ್ನ ಸಾಮಾಜಿಕ ಜಾಲತಾಣದ ಮೂಲಕ ಈ ವಿಷಯವನ್ನು ಹಂಚಿಕೊಂಡ ಟ್ರಂಪ್, ಏರ್ ಫೋರ್ಸ್ ಒನ್ ವಿಮಾನ ಏರುವ ಮೊದಲು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರಾದರೂ ಈ ಇತ್ತೀಚಿನ ಮಿಲಿಟರಿ ಕಾರ್ಯಾಚರಣೆಯ ಬಗ್ಗೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಿಲ್ಲ.

Read More
Next Story