
Iran Israel War| ಮುಂಬೈ ಕ್ಯಾಪ್ಟನ್ ಸೇರಿ 33 ಮಂದಿ ಇರಾನ್ ಸಮರ ಭೂಮಿಯಲ್ಲಿ ಟ್ರ್ಯಾಪ್
ಇರಾನ್ ಯುದ್ಧಭೂಮಿಯಲ್ಲಿ ಮುಂಬೈ ಕ್ಯಾಪ್ಟನ್ ಸೇರಿ 34 ಭಾರತೀಯರು ಅತಂತ್ರರಾಗಿದ್ದಾರೆ. 36 ಲಕ್ಷ ಎಲ್ಪಿಜಿ ಸಿಲಿಂಡರ್ ಹೊತ್ತ ಹಡಗಿನ ಮೇಲೆ ಕ್ಷಿಪಣಿಗಳ ಸುರಿಮಳೆಗೈದಿದ್ದಾರೆ.
ಅಮೆರಿಕ-ಇಸ್ರೇಲ್-ಇರಾನ್ ನಡುವಿನ ಭೀಕರ ಸಂಘರ್ಷ ಈಗ ನೇರವಾಗಿ ಭಾರತೀಯರ ಮನೆ ಬಾಗಿಲಿಗೆ ಬಂದು ತಟ್ಟಿದೆ. ಮುಂಬೈನ ದಹಿಸರ್ ಮೂಲದ ಕ್ಯಾಪ್ಟನ್ ವೀರೇಂದ್ರ ವಿಶ್ವಕರ್ಮ ಮತ್ತು ಅವರ 33 ಮಂದಿ ಸಿಬ್ಬಂದಿ ಕಳೆದ ಮಾರ್ಚ್ 2 ರಿಂದ ಹಾರ್ಮುಜ್ ಜಲಸಂಧಿಯ ಸಮೀಪ ಎಲ್ಪಿಜಿ ಟ್ಯಾಂಕರ್ನಲ್ಲಿ ಸಿಲುಕಿಕೊಂಡಿದ್ದು, ಪ್ರತಿಕ್ಷಣವೂ ಸಾವಿನ ಭಯದಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದಿ ಇಂಡಿಯಾ ಟುಡೇ ವರದಿ ಮಾಡಿದೆ.
ಪ್ರತಿದಿನ ನಮ್ಮ ಮೇಲೆ ಕ್ಷಿಪಣಿಗಳು ಹಾರಾಡುತ್ತಿವೆ
ಅತಂತ್ರವಾಗಿರುವ ಹಡಗಿನಿಂದ ಮಾತನಾಡಿದ ಕ್ಯಾಪ್ಟನ್ ವೀರೇಂದ್ರ, "ನಾವು ಪ್ರತಿದಿನ ಆಕಾಶದಲ್ಲಿ ಕ್ಷಿಪಣಿಗಳು ಮತ್ತು ಡ್ರೋನ್ಗಳು ಹಾರಾಡುವುದನ್ನು ನೋಡುತ್ತಿದ್ದೇವೆ. ಸದಾ ಸೈರನ್ ಶಬ್ದಗಳು ಕೇಳಿಸುತ್ತಿವೆ. ಯಾವಾಗ ಏನಾಗುತ್ತದೋ ಎಂಬ ಆತಂಕ ನಮ್ಮನ್ನು ಕಾಡುತ್ತಿದೆ. ಭಾರತೀಯ ನೌಕಾಪಡೆಯು ನಮ್ಮನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆದೊಯ್ಯುತ್ತದೆ ಎಂಬ ಭರವಸೆಯಲ್ಲಿದ್ದೇವೆ," ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
36 ಲಕ್ಷ ಸಿಲಿಂಡರ್ಗಳಿಗೆ ಆಗುವಷ್ಟು ಅನಿಲ ಹಡಗಿನಲ್ಲಿದೆ!
ಈ ಬೃಹತ್ ಟ್ಯಾಂಕರ್ನಲ್ಲಿ ಭಾರತದ ಮನೆಗಳಿಗೆ ಬೇಕಾಗುವ ಸುಮಾರು 36 ಲಕ್ಷ ಎಲ್ಪಿಜಿ ಸಿಲಿಂಡರ್ಗಳನ್ನು ತುಂಬಿಸುವಷ್ಟು ಅನಿಲವಿದೆ. ಕುವೈತ್ನ ಮಿನಾ ಅಲ್ ಅಹ್ಮದಿ ಬಂದರಿನಿಂದ ಗುಜರಾತ್ನ ದೀನ್ ದಯಾಳ್ (ಕಾಂಡ್ಲಾ) ಬಂದರಿಗೆ ಹೊರಟಿದ್ದ ಈ ಹಡಗು, ಸದ್ಯ ಯುಎಇಯ ಮಿನಾ ಸಕರ್ ಬಂದರಿನ ಬಳಿ ನಿಂತಿದೆ. ಹಡಗಿನ ನಿರ್ವಾಹಕ ಸಂಸ್ಥೆಯಾದ 'GESCO' ಭಾರತೀಯ ನೌಕಾಪಡೆ ಮತ್ತು ಸಚಿವಾಲಯಗಳೊಂದಿಗೆ ಸಂಪರ್ಕದಲ್ಲಿದ್ದು, ಸುರಕ್ಷಿತ ಮಾರ್ಗಕ್ಕಾಗಿ ಪ್ರಯತ್ನಿಸುತ್ತಿದೆ.
ಮುಂಬೈನಲ್ಲಿ ಕುಟುಂಬದ ಕಣ್ಣೀರು
ಇತ್ತ ಮುಂಬೈನಲ್ಲಿ ಕ್ಯಾಪ್ಟನ್ ಪತ್ನಿ ನಿಲ್ಪಾ ವಿಶ್ವಕರ್ಮ ಕಳೆದ ಹಲವು ದಿನಗಳಿಂದ ನಿದ್ದೆಯಿಲ್ಲದೆ ಕಳೆಯುತ್ತಿದ್ದಾರೆ. "ನನ್ನ ಪತಿ ಮತ್ತು ತಂಡದವರು ಸುರಕ್ಷಿತವಾಗಿ ಬರಲಿ ಎಂದು ದಿನವಿಡೀ ಪ್ರಾರ್ಥಿಸುತ್ತಿದ್ದೇನೆ. ಇಂಟರ್ನೆಟ್ ಸಂಪರ್ಕ ಸರಿಯಾಗಿ ಇಲ್ಲದ ಕಾರಣ ವಾಟ್ಸಾಪ್ ಕರೆ ಕಟ್ ಆದಾಗಲೆಲ್ಲ ಎದೆ ಬಡಿತ ಹೆಚ್ಚಾಗುತ್ತದೆ," ಎಂದು ಅವರು ಕಣ್ಣೀರಿಟ್ಟಿದ್ದಾರೆ.
ಇರಾನ್ನಿಂದ ಸಿಕ್ಕಿತು 'ಶುಭ ಸುದ್ದಿ'
ಈ ಆತಂಕದ ನಡುವೆಯೇ ಒಂದು ಸಮಾಧಾನಕರ ಸುದ್ದಿ ಹೊರಬಿದ್ದಿದೆ. ಭಾರತದ ಹಡಗುಗಳಿಗೆ ಹಾರ್ಮುಜ್ ಜಲಸಂಧಿಯಲ್ಲಿ ಸುರಕ್ಷಿತ ಮಾರ್ಗ ನೀಡುವುದಾಗಿ ಇರಾನ್ ರಾಯಭಾರಿ ಮೊಹಮ್ಮದ್ ಫತಾಲಿ ಭರವಸೆ ನೀಡಿದ ಬೆನ್ನಲ್ಲೇ, ಭಾರತಕ್ಕೆ ಬರಬೇಕಿದ್ದ ಎರಡು ಎಲ್ಪಿಜಿ ಟ್ಯಾಂಕರ್ಗಳಿಗೆ ಇರಾನ್ ಅನುಮತಿ ನೀಡಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಭಾರತವನ್ನು ಪ್ರಮುಖ ಪಾಲುದಾರ ಎಂದು ಕರೆದಿರುವ ಇರಾನ್, ಉಭಯ ದೇಶಗಳ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದೆ.

