
Battle for Bastar Part 2: ಮಾವೋವಾದಿಗಳಿಗೆ ತಿರುಗುಬಾಣವಾದ ಬಹುಮುಖಿ ಕಾರ್ಯತಂತ್ರ
ಭದ್ರತಾ ಪಡೆಗಳ ನೂರಾರು ಸಿಬ್ಬಂದಿ ಮಾವೋವಾದಿಗಳ ದಾಳಿಯಲ್ಲಿ ಉಸಿರು ಚೆಲ್ಲಿದ್ದಾರೆ. ಆದರೆ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಭದ್ರತಾ ಪಡೆ ನಡೆಸಿದ ಪ್ರತಿಯೊಂದು ನಡೆಯೂ ತೀವ್ರಗಾಮಿಗಳಿಗೆ ತಿರುಗುಬಾಣವಾಗಿದೆ.
ಮನಮೋಹನ್ ಸಿಂಗ್ ನೇತೃತ್ವದ ಅಂದಿನ ಕೇಂದ್ರ ಸರ್ಕಾರ 2010ರಲ್ಲಿ ಕೈಗೊಂಡ ‘ಆಪರೇಷನ್ ಗ್ರೀನ್ ಹಂಟ್’ ಬಹುತೇಕರಿಗೆ ನೆನಪಿರಲಿಕ್ಕಿಲ್ಲ. ಆದರೆ ಅದಾಗಿ ಅಜಮಾಸು ಒಂದೂವರೆ ದಶಕದ ಬಳಿಕ ದೇಶದ ಆಂತರಿಕ ಭದ್ರತೆಗೆ ಬಹುದೊಡ್ಡ ಕಂಟಕವೆಂದು ಪರಿಗಣಿಸಲಾದ ಮಾವೋವಾದಿ ದಂಗೆಯನ್ನು ಮೂಲೋತ್ಪಾಟನೆ ಮಾಡುವ ಬೃಹತ್ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ. ಬಹುಪದರದ ಈ ಕಾರ್ಯಾಚರಣೆಯನ್ನು ಅನೇಕ ರಾಜ್ಯಗಳ ಭದ್ರತಾಪಡೆಗಳು ಕಾರ್ಯರೂಪಕ್ಕೆ ತಂದಿರುವುದು ಇನ್ನೊಂದು ಹೆಗ್ಗಳಿಕೆ.
ಕಮ್ಯುನಿಸ್ಟ್ ಪಕ್ಷ (ಮಾವೋವಾದಿಗಳು) ತೀವ್ರ ಪ್ರಮಾಣದ ಅಸ್ತಿತ್ವದ ಬಿಕ್ಕಟ್ಟು ಎದುರಿಸುತ್ತಿರುವುದು ಸತ್ಯ. ಅವರು ಒಂದು ಕಾಲದಲ್ಲಿ ಪ್ರಾಬಲ್ಯ ಸಾಧಿಸಿದ್ದ ಪ್ರದೇಶಗಳು ಈಗ ಅವರ ಕೈತಪ್ಪಿಹೋಗಿವೆ. ಅವರ ಪಕ್ಷದ ಸಂಘಟನೆ ಕೆಲಸಗಳು ನಿಂತೇಹೋಗಿವೆ. ಕಳೆದೆರಡು ವರ್ಷಗಳ ಅವಧಿಯಲ್ಲಿ ಅನೇಕ ಮಂದಿ ನಕ್ಸಲರು ಪೊಲೀಸರಿಗೆ ಶರಣಾಗಿದ್ದಾರೆ. ಛತ್ತೀಸಗಢದ ಬಸ್ತರ್ ಮತ್ತು ನೆರೆಯ ಮಹಾರಾಷ್ಟ್ರದ ಗಡ್ಚಿರೋಲಿ ಮತ್ತು ಇತರ ರಾಜ್ಯಗಳಲ್ಲಿ ಭದ್ರತಾ ಪಡೆಗಳು ನಡೆಸಿದ ಆಪರೇಷನ್ ಗಳಲ್ಲಿ ಸಂಘಟನೆಯ ಹಿರಿಯ ನಾಯಕರು ಮತ್ತು ಕೇಂದ್ರೀಯ ಸಮಿತಿ ಸದಸ್ಯರು ಹತರಾಗಿದ್ದಾರೆ. ಇವೆಲ್ಲದರ ಫಲವಾಗಿ ಮಾವೋವಾದಿ ಬಂಡುಕೋರರ ಸಂಖ್ಯೆ ಗಣನೀಯವಾಗಿ ತಗ್ಗಿದೆ ಎಂದು ಈ ಹಿಂದೆ ಶರಣಾದ ನಕ್ಸಲ್ ಕಾರ್ಯಕರ್ತರು, ಪೊಲೀಸ್ ಮತ್ತು ಗುಪ್ತಚರ ಅಧಿಕಾರಿಗಳು, ಬಸ್ತರ್ ಮತ್ತು ಅಕ್ಕಪಕ್ಕದ ಗ್ರಾಮಗಳ ಜನರು ದ ಫೆಡರಲ್ ಗೆ ಖಚಿತ ಮಾತುಗಳಲ್ಲಿ ತಿಳಿಸುತ್ತಾರೆ.
ಹಾಗಂತ ಈ ಪರಿವರ್ತನೆಗಳು ಸುಖಾಸುಮ್ಮನೆ ಬಂದಿದ್ದಲ್ಲ. ಭದ್ರತಾ ಪಡೆಗಳು ದೊಡ್ಡ ಪೆಟ್ಟನ್ನೇ ತಿಂದಿವೆ. ಅದರ ನೂರಾರು ಸಿಬ್ಬಂದಿ ಮಾವೋವಾದಿಗಳ ದಾಳಿಯಲ್ಲಿ ಉಸಿರು ಚೆಲ್ಲಿದ್ದಾರೆ. ಆದರೆ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಭದ್ರತಾ ಪಡೆ ನಡೆಸಿದ ಪ್ರತಿಯೊಂದು ನಡೆಯೂ ತೀವ್ರಗಾಮಿಗಳಿಗೆ ತಿರುಗುಬಾಣವಾಗಿದೆ. ಮಾವೋವಾದಿಗಳು ಹಿಮ್ಮೆಟ್ಟುವಂತೆ ಮಾಡಿದೆ.
ಸಂಪನ್ಮೂಲವೂ ಸಮನ್ವಯವೂ
ಭದ್ರತಾಪಡೆಗಳೊಂದಿಗೆ ನಡೆಯುವ ಸಂವಹನದಲ್ಲಿ ಮತ್ತೆ ಮತ್ತೆ ಪ್ರಸ್ತಾಪವಾಗುತ್ತಿದ್ದ ಒಂದು ಸಂಗತಿ ಎಂದರೆ ರಾಜಕೀಯ ಇಚ್ಛಾಶಕ್ತಿಯಲ್ಲಿನ ಗಮನಾರ್ಹವಾದ ಬದಲಾವಣೆ. ಮಾವೋವಾದಿಗಳ ವಿರುದ್ಧ ನಿರ್ಣಾಯಕವಾಗಿ ಮುಂದುವರಿಯಲು ಇದು ಅತ್ಯಗತ್ಯ ಅಸ್ತ್ರವಾಗಿತ್ತು.
ಹಿಂದಿನ ಕಾರ್ಯತಂತ್ರಗಳನ್ನು ಆಧಾರವಾಗಿಟ್ಟುಕೊಂಡು 2023ರ ಡಿಸೆಂಬರ್ ತಿಂಗಳಿನಿಂದ ಈ ತನಕ ಸಮನ್ವಯಕ್ಕೆ ಹೆಚ್ಚಿನ ಒತ್ತು ನೀಡಿಲಾಗಿದೆ. ಮಧ್ಯ ಭಾರತದ ಎಡಪಂಥೀಯ ತೀವ್ರವಾದಿಗಳ ಕಾರ್ಯಾಚರಣೆಯ ಪ್ರದೇಶಗಳಲ್ಲಿ ಅಪಾರ ಪ್ರಮಾಣದ ವೆಚ್ಚ ಮಾಡುವ ದೃಷ್ಟಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪನ್ಮೂಲಗಳನ್ನು ಕ್ರೋಢೀಕರಿಸುವ ನಿಟ್ಟಿನಲ್ಲಿ ಹೆಚ್ಚಿನ ಆದ್ಯತೆ ನೀಡಿದೆ.
ಹೊಸ ನೇಮಕಾತಿ, ಬಹುಹಂತದ ತರಬೇತಿಯನ್ನು ಆಯೋಜಿಸುವುದು, ಗುಪ್ತಚರ ಮಾಹಿತಿ ಸಂಗ್ರಹಿಸುವುದು, ಹೋರಾಟಕ್ಕೆ ಬೇಕಾದ ಸಲಕರಣೆಗಳನ್ನು ಶೇಖರಣೆ ಮಾಡುವುದರಿಂದ ಆರಂಭಿಸಿ ಮಾಹಿತಿ ನೀಡುವವರಿಗೆ ಮತ್ತು ಶರಣಾಗಲು ಬಯಸುವ ಮಾವೋವಾದಿಗಳಿಗೆ ಭಾರೀ ಮೊತ್ತದ ಪ್ರೋತ್ಸಾಹಧನವನ್ನು ನೀಡುವ ತನಕ ಸಂಪನ್ಮೂಲಗಳ ಸಮನ್ವಯದ ಪ್ರಕ್ರಿಯೆಗಳು ನಡೆದಿದ್ದವು.
ಇತ್ತೀಚಿನ ಕಾರ್ಯಾಚರಣೆಗಳ ಉಸ್ತುವಾರಿಯನ್ನು ಹೊತ್ತಿರುವ ಗುಪ್ತಚರ ಅಧಿಕಾರಿಗಳು ನೀಡುವ ಮಾಹಿತಿಯ ಪ್ರಕಾರ, ರಾಜ್ಯಗಳ ನಕ್ಸಲ್ ನಿಗ್ರಹ ಸಂಘಟನೆಗಳು, ಸ್ಥಳೀಯ ಪೊಲೀಸರು ಮತ್ತು ಕೇಂದ್ರೀಯ ಅರೆಸೇನಾಪಡೆಗಳು ಮತ್ತು ಸರ್ಕಾರದ ಇತರ ಸಂಬಂಧಿತ ಇಲಾಖೆಗಳ ನಡುವಿನ ಸಮನ್ವಯ ಗಣನೀಯ ಪ್ರಮಾಣದಲ್ಲಿ ಸುಧಾರಿಸಿರುವುದು ಪ್ಲಸ್-ಪಾಯಿಂಟ್ ಆಯಿತು ಎನ್ನುತ್ತಾರೆ.
ಹೆಚ್ಚುತ್ತಿರುವ ನಿಖರವಾದ ಕಾರ್ಯಾಚರಣೆಗಳಲ್ಲಿ ಉನ್ನತ ಸಶಸ್ತ್ರ ಕೇಡರ್ಗಳನ್ನು ನಿರ್ಮೂಲನೆ ಮಾಡುವುದು ಭದ್ರತಾ ಪಡೆಗಳ ಆದ್ಯತೆಯಾಗಿದೆ. ಜೊತೆಗೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ದಾಸ್ತಾನುಗಳನ್ನು ಮರಳಿ ಪಡೆಯುವುದು ಮತ್ತು ಮಾವೋವಾದಿ ಕೇಡರ್ಗಳನ್ನು ಅವರ ಶಸ್ತ್ರಾಸ್ತ್ರಗಳೊಂದಿಗೆ ಶರಣಾಗುವಂತೆ ಒತ್ತಾಯಿಸುವುದು ಸಹ ಒಂದು ಪ್ರಮುಖ ಉದ್ದೇಶವಾಗಿದೆ.
ಬಂಡುಕೋರರ ನಿಶ್ಶಸ್ತ್ರಕ್ಕೆ ಗಮನ
“ಇಡೀ ನಕ್ಸಲ್ ಚಳವಳಿಯನ್ನು ನಿರಾಯುಧಗೊಳಿಸುವುದು ನಮ್ಮ ಮುಖ್ಯ ಗುರಿ” ಹೆಸರು ಹೇಳಲು ಇಚ್ಛಿಸದ ಅಧಿಕಾರಿ ದ ಫೆಡರಲ್ ಗೆ ತಿಳಿಸಿದರು.
ನಿಖರವಾದ ಕಾರ್ಯಾಚರಣೆಗಳ ಮೂಲಕ ಶಸ್ತ್ರಾಸ್ತ್ರ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಉನ್ನತ ಮಟ್ಟದ ನಾಯಕರನ್ನು ನಿರಾಯುಧಗೊಳಿಸುವುದು ಮಾತ್ರ ಭದ್ರತಾ ಪಡೆಯ ಆದ್ಯತೆಯಾಗಿರಲಿಲ್ಲ. ಬದಲಾಗಿ ಅಡಗಿಸಿಟ್ಟಿರುವ ಶಸ್ತ್ರಾಸ್ತ್ರ ಮತ್ತು ಮದ್ದು ಗುಂಡುಗಳನ್ನು ವಶಕ್ಕೆ ಪಡೆಯುವುದು, ಕಾರ್ಯಕರ್ತರು ಶಸ್ತ್ರಾಸ್ತ್ರಗಳೊಂದಿಗೆ ಶರಣಾಗುವಂತೆ ಪ್ರೇರೇಪಿಸುವುದು ಕೂಡ ಇದರಲ್ಲಿ ಸೇರಿದೆ ಎಂದು ಅವರು ವಿವರಿಸಿದರು.
ಎಡಪಂಥೀಯ ತೀವ್ರಗಾಮಿಗಳನ್ನು ಬೇರುಸಹಿತ ಕಿತ್ತುಹಾಕಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಂದಿನ ವರ್ಷದ ಮಾರ್ಚ್ 31ರ ಗಡುವು ವಿಧಿಸಿದ್ದಾರೆಂದು ಹೇಳಲಾಗಿದೆ.
ಮಾವೋವಾದಿಗಳು ಮಧ್ಯ-ಭಾರತ ಮತ್ತು ಇನ್ನಿತರ ಒಳನಾಡು ಪ್ರದೇಶಗಳಲ್ಲಿ ಆಳವಾಗಿ ಬೇರೂರಿರುವುದರಿಂದ ಶಾ ಅವರು ವಿಧಿಸಿದ ಗಡುವಿನೊಳಗೆ ನಕ್ಸಲ್ ಚಳವಳಿಗೆ ಕೊನೆಯ ಮೊಳೆ ಹೊಡೆಯುವುದು ವಾಸ್ತವಕ್ಕೆ ದೂರವೆಂದು ಕಾಣುತ್ತದೆ. ಹಾಗಿದ್ದೂ ಬಂಡುಕೋರರಿಗೆ ವಿಶ್ರಾಂತಿಗಾಗಲಿ, ಮರುಚಿಂತನೆಗಾಗಲಿ ಅಥವಾ ಮರುನಿರ್ಮಾಣಕ್ಕೆ ಅವಕಾಶವನ್ನೇ ಕೊಡದ ಹಾಗೆ ಕಾರ್ಯತಂತ್ರ ರೂಪಿಸಬೇಕಾದ ತುರ್ತು ಅಗತ್ಯವಿದೆ.
ಸಿಗದ ಸ್ಥಳೀಯರ ಬೆಂಬಲ
ಮಾವೋವಾದಿಗಳು ಗಟ್ಟಿಯಾಗಿ ಬೇರೂರಿರುವ ಬಸ್ತಾರ್ ಉದ್ದಗಲಕ್ಕೂ ಮತ್ತು ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಒಡಿಶಾಕ್ಕೆ ಸೇರಿದ ನೆರೆಯ ಜಿಲ್ಲೆಗಳಲ್ಲಿ ಹೊಸ ನೆಲೆಗಳನ್ನು ಸ್ಥಾಪಿಸುವ ಮೂಲಕ ಭದ್ರತೆಯ ವಿಚಾರದಲ್ಲಿ ಇದ್ದ ಲೋಪವನ್ನು ನಿವಾರಣೆ ಮಾಡಲಾಗಿತ್ತು. ಇದರಿಂದಾಗಿ ಬಂಡುಕೋರರಿಗೆ ಸಿಗುತ್ತಿದ್ದ ಸ್ಥಳೀಯರ ಬೆಂಬಲ ಸಂಪೂರ್ಣವಾಗಿ ನಿಂತುಹೋಗಿತ್ತು ಎಂದು ಈ ವರದಿಗಾರರೊಂದಿಗೆ ಮಾತನಾಡಿದ ಶರಣಾಗತರಾದ ಅನೇಕ ಮಂದಿ ಕಾರ್ಯಕರ್ತರು ತಿಳಿಸಿದರು.
ಈ ಕಾರಣದಿಂದಾಗಿಯೇ ಅನೇಕ ಮಂದಿ ಕೆಳ ಹಾಗೂ ಮಧ್ಯಮ ಕ್ರಮಾಂಕದ ಸಶಸ್ತ್ರ ಕೇಡರ್ ಗಳು ತಮ್ಮ ಆಯುಧಗಳನ್ನು ಕೆಳಗಿಟ್ಟು ಹೋರಾಟಕ್ಕೆ ಬೆನ್ನುಹಾಕಿದರು ಎಂದು ಅಧಿಕಾರಿಗಳು ತಿಳಿಸುತ್ತಾರೆ.
“2026ರ ಹೊತ್ತಿಗೆ ಮಾವೋವಾದಿ ಚಳವಳಿಗೆ ಇತಿಶ್ರೀ ಹಾಡಬೇಕು ಎನ್ನುವುದು ಬಹಳ ದೊಡ್ಡ ಗುರಿಯಾಯಿತು. ಅಷ್ಟರೊಳಗೆ ಎಲ್ಲವೂ ಮುಗಿದು ಹೋಗಲಿದೆ ಎಂಬ ಭ್ರಮೆಯಲ್ಲಿ ನಾವಿಲ್ಲ. ಹಾಗಾಗಿ ನಾವು ಎಂದಿಗೂ ಈಗಿನ ಬಿಗಿ ಹಿಡಿತವನ್ನು ಸಡಿಲಿಸುವುದಿಲ್ಲ” ಎಂದು ಹೆಸರು ಹೇಳಲಿಚ್ಛಿಸದ ಛತ್ತೀಸಗಢದ ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿರುವ ಹಿರಿಯ ಅಧಿಕಾರಿ ತಿಳಿಸುತ್ತಾರೆ.
ಸುಭದ್ರತಾ ಶಿಬಿರಗಳ ಹೆಚ್ಚಳ
ಕಳೆದ ಒಂದೂವರೆ ವರ್ಷಗಳ ಅವಧಿಯಲ್ಲಿ ಮಾವೋವಾದಿಗಳ ಅತ್ಯಂತ ಪ್ರಮುಖ ಹಾಗೂ ಕಟ್ಟಕಡೆಯ ಭದ್ರಕೋಟೆಗಳಿರುವ ಕಡೆಗಳಲ್ಲಿ ಮುಂಚೂಣಿ ಶಿಬಿರಗಳೆಂದು ಕರೆಯಲಾಗುವ 20 ಹೊಸ ಭದ್ರತಾ ಶಿಬಿರಗಳನ್ನು ತೆರೆಯಲಾಗಿದೆ. ರಸ್ತೆಗಳ ನಿರ್ಮಾಣ, ತಂತಿ ಬೇಲಿ ರಚನೆ, ವಾಸದ ಸ್ಥಳಗಳು ಮತ್ತು ಬ್ಯಾರಕ್ ಗಳ ನಿರ್ಮಾಣ ಹಾಗೂ ಅದರೊಳಗೆ ವಾರ್-ರೂಮ್ ಗಳ ನಿರ್ಮಾಣ ಸೇರಿದಂತೆ ಸುಭದ್ರವಾದ ಭದ್ರತಾ ಶಿಬಿರವನ್ನು ಆರಂಭಿಸಲು ಸಾಕಷ್ಟು ಶ್ರಮ ಹಾಕಬೇಕಾಗುತ್ತದೆ ಎಂದು ಬಿಜಾಪುರ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಯಾದವ್ ದ ಫೆಡರಲ್ ಗೆ ವಿವರಿಸುತ್ತಾರೆ.
ಭದ್ರತಾ ಉಪಕರಣದ ಮೇಲೆ ಇತರ ವಿತರಣಾ ಸೇವೆಗಳು ಬರಲು ಪ್ರಾರಂಭಿಸಿವೆ: ಆರೋಗ್ಯ, ಶಾಲೆಗಳು, ಬ್ಯಾಂಕುಗಳು ಮತ್ತು ಸಾರ್ವಜನಿಕ ವಿತರಣಾ ಸೇವೆಗಳು ಆರಂಭವಾಗಿವೆ.
ಹೀಗೆ ಭದ್ರತಾ ಶಿಬಿರಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ಹೆಚ್ಚಿಸುವುದರಿಂದ ಪಡೆಗಳಿಗೆ ಶೀಘ್ರವಾಗಿ ದಾಳಿ ಮಾಡುವ ಸಾಮರ್ಥ್ಯವನ್ನು ಹೆಚ್ಚುತ್ತದೆ, ಇದು ಇತ್ತೀಚಿನ ಎಲ್ಲಾ ಕಾರ್ಯಾಚರಣೆಗಳ ಮುಖ್ಯ ಲಕ್ಷಣವಾಗಿದೆ. ಇದು ಬಂಡುಕೋರರಿಗೆ ತಮ್ಮ ಹಿಡಿತದಲ್ಲಿದ್ದ ಹತ್ತಿರದ ಗ್ರಾಮಗಳಲ್ಲಿ ಸಭೆಗಳನ್ನು ನಡೆಸಲು ಕಷ್ಟವಾಗುತ್ತದೆ.
ಭದ್ರತೆಯನ್ನು ಗಟ್ಟಿಗೊಳಿಸಿದ ಬಳಿಕ ಇದೇ ಶಿಬಿರಗಳು ಅನೇಕ ಆಡಳಿತಾತ್ಮಕ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಆಶ್ರಯ ಒದಗಿಸುತ್ತವೆ. ಅಲ್ಲಿ ಮೊಬೈಲ್ ಟವರ್ ನಿರ್ಮಾಣಮಾಡಬಹುದು, ಆಧಾರ್ ಕಾರ್ಡ್ ಗಳನ್ನು ನೀಡಬಹುದು, ಬ್ಯಾಂಕ್ ಖಾತೆಗಳನ್ನು ತೆರೆಯಬಹುದು ಮತ್ತು ಗ್ರಾಮಸ್ಥರಿಗೆ ಬೇಕಾದ ಯಾವುದೇ ಪ್ರಾಥಮಿಕ ಕಾರ್ಯಗಳಿಗೆ ಅವುಗಳನ್ನು ಬಳಸಿಕೊಳ್ಳಬಹುದು.
ಬಹುಹಂತದ ಕಾರ್ಯತಂತ್ರ
“ಸುಮಾರು ಒಂದು ದಶಕದ ಹಿಂದೆ ಬಸ್ತಾರ್ ನ ಸುಮಾರು ಶೇ.70ರಷ್ಟು ವಲಯವು ಭದ್ರತಾ ಪಡೆಗಳು ಪ್ರವೇಶ ಪಡೆಯಲು ದುಸ್ತರವಾಗಿತ್ತು. ಈಗ ನಾವು ಅಷ್ಟೂ ಪ್ರದೇಶವನ್ನು ನಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದೇವೆ. ನಮ್ಮ ಕಾರ್ಯಾಚರಣೆಯ ವ್ಯಾಪ್ತಿ ನೂರಕ್ಕೆ ನೂರರಷ್ಟಿದೆ. ಇನ್ನು ಅತ್ಯಲ್ಪ ಅವಧಿಯಲ್ಲಿ ಈ ಇಡೀ ವಲಯವನ್ನು ನಮ್ಮ ಹಿಡಿತಕ್ಕೆ ತೆಗೆದುಕೊಳ್ಳುತ್ತೇವೆ” ಎಂದು ಬಸ್ತರ್ ವಲಯದ ಪೊಲೀಸ್ ಮಹಾನಿರ್ದೇಶಕ ಸುಂದರ್ ರಾಜ್ ಪಟ್ಟಿಲಿಂಗಂ ಅವರು ಹೇಳುತ್ತಾರೆ.
ಅಬುಜಾಮದ್ (ನಾರಾಯಣಪುರ ಜಿಲ್ಲೆ), ಇಂದ್ರಾವತಿ ಹುಲಿ ಸಂರಕ್ಷಣಾ ಮೀಸಲು ಪ್ರದೇಶ (ಬಿಜಾಪುರ ಜಿಲ್ಲೆ), ಕರೆಗುಟ್ಟೆ ಬೆಟ್ಟಗಳು (ಬಿಜಾಪುರ ಮತ್ತು ತೆಲಂಗಾಣ ಗಡಿಭಾಗ) ಮತ್ತು ಸರ್ವಋತು ಇಂದ್ರಾವತಿ ನದಿಯ ಉದ್ದಕ್ಕೂ ಇರುವ ಮಹಾರಾಷ್ಟ್ರದ ಗಡಿಭಾಗದಲ್ಲಿರುವ ಕುಗ್ರಾಮಗಳಲ್ಲಿ ಭದ್ರತಾ ಪಡೆಗಳ ಶಿಬಿರಗಳಿಲ್ಲ.
2013ರಲ್ಲಿ ಪೊಲೀಸ್ ಮತ್ತು ಅರೆಸೇನಾ ಪಡೆ ಸೀಮಿತ ಸಂಪನ್ಮೂಲದೊಂದಿಗೆ ಕೆಲಸ ಮಾಡುತ್ತಿತ್ತು. ಈಗ, 2025ರಲ್ಲಿ ಬಸ್ತಾರ್ ವಲಯದಲ್ಲಿಯೇ 300 ಭದ್ರತಾ ಶಿಬಿರಗಳನ್ನು ಮತ್ತು ನೂರಕ್ಕೂ ಹೆಚ್ಚು ಪೊಲೀಸ್ ಠಾಣೆಗಳನ್ನು ತೆರೆಯಲಾಗಿದೆ. ಇದರಿಂದ ಭದ್ರತಾ ಪಡೆಗಳಿಗೆ ಕಾರ್ಯಾಚರಣೆ ನಡೆಸಲು ಸಾಕಷ್ಟು ಅನುಕೂಲ ಕಲ್ಪಿಸಿದಂತಾಗಿದೆ ಎಂದು ಸುಂದರ್ ರಾಜ್ ಅವರು ತಿಳಿಸುತ್ತಾರೆ.
“ಈ ಇಷ್ಟೂ ಪ್ರಕ್ರಿಯೆಗಳಿಂದ ಎರಡು ರೀತಿಯಲ್ಲಿ ಪ್ರಯೋಜನ ಉಂಟಾಗಿದೆ. ಒಂದು ಭದ್ರತೆಯ ವಿಚಾರದಲ್ಲಿ ಇದ್ದ ಶೂನ್ಯವನ್ನು ಭರ್ತಿಮಾಡಲಾಗಿದೆ ಮತ್ತು ಎರಡನೆಯದಾಗಿ ದಾಳಿ ನಡೆಸುವ ನೆಲೆಗಳು ಮತ್ತು ಗುರಿಗಳ ನಡುವಿನ ಗಣನೀಯವಾಗಿ ತಗ್ಗಿದೆ” ಎಂದು ಅವರು ಹೇಳುತ್ತಾರೆ.
ಎರಡನೆಯದಾಗಿ ಸ್ಥಳೀಯವಾಗಿ ಸ್ಥಾಪಿಸಲಾದ ಮೊಬೈಲ್ ಟವರ್ ಗಳು ಗ್ರಾಮಸ್ಥರು ಮತ್ತು ಪೊಲೀಸರಿಬ್ಬರಿಗೂ ಲಾಭವಾಗಿದೆ. ಇಂದು ಬಸ್ತರ್ ವಲಯವೊಂದರಲ್ಲೇ 800 ಮೊಬೈಲ್ ಟವರ್ ಗಳನ್ನು ನಿರ್ಮಿಸಲಾಗಿದ್ದು ಮೊಬೈಲ್ ಮತ್ತು ಇಂಟರ್ನೆಟ್ ಸಂಪರ್ಕ ಗಣನೀಯವಾಗಿ ಸುಧಾರಿಸಿದೆ. ಹತ್ತು ವರ್ಷಗಳ ಹಿಂದೆ ಇಲ್ಲೆಲ್ಲೂ ಮೊಬೈಲ್ ಜಾಲಕ್ಕಾಗಿ ಪರದಾಡಬೇಕಾಗಿತ್ತು.
ಡೋರ್ನಪಾಲ್-ಜಗರಗುಂಡ-ಬಸಗುಡ ಮಾರ್ಗ ಅಥವಾ ಸೂಕ್ಷ್ಮಪ್ರದೇಶವಾದ ನಾರಾಯಣಪುರ-ಬಸಗುಡ-ದಂತೇವಾಡ ಮಾರ್ಗದಂತಹ ಹಳೆಯ ರಸ್ತೆ ಸಂಪರ್ಕವನ್ನು ಪುನಃ ಸ್ಥಾಪಿಸಲಾಗಿದೆ, ಆದರೆ ಹೊಸ ರಾಷ್ಟ್ರೀಯ ಹೆದ್ದಾರಿಯು ಶೀಘ್ರದಲ್ಲೇ ನಾರಾಯಣಪುರವನ್ನು ಗಡ್ಚಿರೋಲಿಗೆ ಸಂಪರ್ಕಿಸುತ್ತದೆ (ನಕ್ಷೆಯಲ್ಲಿ ಬಿಳಿ ರೇಖೆಯೊಂದಿಗೆ ತೋರಿಸಲಾಗಿದೆ), ಅಬುಜ್ಮದ್ನ ತಪ್ಪಲಿನ ಮೂಲಕ ಹಾದುಹೋಗುತ್ತದೆ. ನಕ್ಷೆಯ ಎಡಭಾಗದಲ್ಲಿರುವ ಫೋಟೋ ಬಸ್ತಾರ್ ಅನ್ನು ದಕ್ಷಿಣ ಗಡ್ಚಿರೋಲಿಯೊಂದಿಗೆ ಸಂಪರ್ಕಿಸುವ ಹೊಸ ಭೋಪಾಲಪಟ್ಟಣಂ ಸೇತುವೆಯನ್ನು ತೋರಿಸುತ್ತದೆ. ಬಲಭಾಗದಲ್ಲಿರುವ ಒಂದು ಹೊಸದಾಗಿ ನಿರ್ಮಿಸಲಾದ ಡೋರ್ನಪಾಲ್-ಜಗರಗೊಂಡ ರಸ್ತೆಯನ್ನು ತೋರಿಸುತ್ತದೆ.
ಸ್ವಾತಂತ್ರ್ಯ ತಂದ ರಸ್ತೆಗಳು
“ರಸ್ತೆಗಳ ಸಂಪರ್ಕ ಇಲ್ಲಿನ ಜನರಿಗೆ ಹೊಸ ಸ್ವಾತಂತ್ರ್ಯವನ್ನೇ ಕಲ್ಪಿಸಿದೆ. ದ್ರೋಣಪಾಲ್-ಜಗರ್ಗುಂಡ-ಬಸಗುಡ ರಸ್ತೆ ಸಂಪರ್ಕದಿಂದ ಆಗಿರುವ ಪ್ರಯೋಜನ ನಿಜಕ್ಕೂ ದೊಡ್ಡದು. ಅದೇ ರೀತಿ ಅತ್ಯಂತ ಸೂಕ್ಷ್ಮ ವಲಯವೆಂದು ಪರಿಗಣಿಸಲಾಗಿರುವ ನಾರಾಯಣಪುರ-ಬಸಗುಡ-ದಾಂತೇವಾಡ ರಸ್ತೆ ಸಂಪರ್ಕ ಕೂಡ” ಎಂದು ಪೊಲೀಸ್ ಮಹಾನಿರ್ದೇಶಕರು ತಿಳಿಸುತ್ತಾರೆ.
ನಾರಾಯಣಪುರದಿಂದ ಗಡ್-ಚಿರೋಲಿಗೆ ಸಂಪರ್ಕ ಕಲ್ಪಿಸುವ ಹೊಸ ರಾಷ್ಟ್ರೀಯ ಹೆದ್ದಾರಿಯು ಶೀಘ್ರದಲ್ಲಿಯೇ ಅಬುಜಾಮದ್ ತಪ್ಪಲಿನಲ್ಲಿ ಹಾದುಹೋಗಿ ಮಹಾರಾಷ್ಟ್ರದ ಗಡ್-ಚಿರೋಲಿಯಲ್ಲಿರುವ ಲಹೇನ್ ಮತ್ತು ಭಮ್ರಾಗಢವನ್ನು ಸಂಪರ್ಕಿಸಲಿದೆ.
ಇವೆಲ್ಲದರ ಜೊತೆಗೆ ವಿದ್ಯುತ್ ಸಂಪರ್ಕದಲ್ಲಿಯೂ ಸಾಕಷ್ಟು ಸುಧಾರಣೆಯಾಗಿದೆ. “ಇಂತಹ ಸಂಪರ್ಕವು ಸಮಸ್ಯೆಗೆ ಪರಿಹಾರವನ್ನು ಒದಗಿಸುತ್ತದೆ. ಮತ್ತು ಪ್ರತ್ಯೇಕತೆಯನ್ನೂ ಕೊನೆಗೊಳಿಸುತ್ತದೆ” ಎಂದು ಅವರು ಹೇಳುತ್ತಾರೆ.
ಭದ್ರತಾ ವ್ಯವಸ್ಥೆಗಳು ಸುಧಾರಿಸಿದ್ದರಿಂದ ಇತರ ವಿತರಣಾ ಸೇವೆಗಳಿಗೂ ದಾರಿ ಕಲ್ಪಿಸಿದಂತಾಗಿದೆ. ಆರೋಗ್ಯ, ಶಾಲೆಗಳು, ಬ್ಯಾಂಕ್ ಮತ್ತು ಪಡಿತರ ಸೇವೆಗಳು ಆರಂಭವಾಗಿವೆ. ಇದರಿಂದ ಸರ್ಕಾರದ ಇತರ ಇಲಾಖೆಗಳು ಯಾವುದೇ ಸಮಯ ಪೋಲು ಮಾಡದೆ ಕಾರ್ಯನಿರ್ವಹಿಸಲು ಅನುಕೂಲವಾಗಿದೆ.
ಜಗರ್ಗುಂಡವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ ಅದು ಒಂದು ತಾಲೂಕು ಕೇಂದ್ರವಾಗಿದ್ದರೂ ಕೂಡ ಒಂದು ಗ್ರಾಮವಾಗಿ ಉಳಿದಿದೆ. ಇಲ್ಲಿ ತಾಲೂಕು ಕಚೇರಿಯಿದೆ, ಆದರೆ ತಹಸೀಲ್ದಾರರಿಲ್ಲ ಅಥವಾ ಕಂದಾಯ ಮತ್ತು ಆಡಳಿತ ಸಿಬ್ಬಂದಿ ಇಲ್ಲ. ತಮಗೆ ಬೇಕಾದ ಮೂಲಭೂತ ಕೆಲಸಗಳನ್ನು ಮಾಡಲು ಸುಕ್ಮಾಗೆ ಹೋಗಬೇಕು ಎಂದು ಇಲ್ಲಿನ ಗ್ರಾಮಸ್ಥರು ಹೇಳುತ್ತಾರೆ.
ಭದ್ರತಾ ಪಡೆಗೆ ಈಗ ಸಿಕ್ಕಿರುವ ಯಶಸ್ಸು ಏಕಾಏಕಿ ಬಂದಿದ್ದಲ್ಲ. ಹದಿನೈದು ವರ್ಷಗಳ ನಿರಂತರ ಹೋರಾಟದ ಬಳಿಕ ಬಂದಿದ್ದಾಗಿದೆ. ಇದರಲ್ಲಿ ಅನೇಕ ಹೊಡೆತಗಳನ್ನೂ ತಿಂದಿದೆ. ಅಪರಿಚಿತ ಕಗ್ಗಾಡು ಪ್ರದೇಶಗಳು, ಬೆಟ್ಟ-ಕಣಿವೆಗಳ ಕಾರಣದಿಂದ ಮಾವೋವಾದಿಗಳು ನಡೆಸುವ ಹಠಾತ್ ನಡೆಸುವ ಗೆರಿಲ್ಲಾ ದಾಳಿಗಳಲ್ಲಿ ಕಳೆದ ಹತ್ತಾರು ವರ್ಷಗಳಲ್ಲಿ ನೂರಾರು ಭದ್ರತಾ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ. ಭದ್ರತಾ ಪಡೆಗಳ ಕಾರ್ಯತಂತ್ರ ಬದಲಾಗಿದೆ, ಸಿದ್ಧತೆಗಳಲ್ಲಿ ಸುಧಾರಣೆಯಾಗಿದೆ. ಹಾಗಾಗಿ ಬಂಡುಕೋರರನ್ನು ಬಗ್ಗುಬಡಿಯುವಲ್ಲಿ ಸಫಲರಾಗಿದ್ದಾರೆ.
ಸುಕ್ಮಾ ಮತ್ತು ಪುವರ್ತಿ ಎಂಬ ದೂರದ ಹಳ್ಳಿಯ ನಡುವಿನ ಪ್ರಯಾಣಿಕರ ಬಸ್ ಸೇವೆಯು ಇಲ್ಲಿನ ಜನಜೀವನವನ್ನು ಹೆಚ್ಚು ಸುಗಮಗೊಳಿಸಿದೆ ಮತ್ತು ಸ್ಥಳೀಯರಿಗೆ ಸ್ವಲ್ಪ ಆರಾಮದಾಯಕವಾಗಿಸಿದೆ, ಇಲ್ಲದಿದ್ದರೆ ಅವರು ಸುಕ್ಮಾ ತಲುಪಲು ಮೈಲುಗಟ್ಟಲೆ ಮತ್ತು ದಿನಗಟ್ಟಲೆ ನಡೆದುಕೊಂಡು ಹೋಗಬೇಕಾಗಿತ್ತು.
ಬಸ್ಸು ಬಂತು ಬಸ್ಸು
ಹಿಂದೆಲ್ಲ ಸುಕ್ಮಾವನ್ನು ತಲುಪಲು ಮೈಲುಗಟ್ಟಳೆ ಮತ್ತು ದಿನಗಟ್ಟಳೆ ನಡೆಯಬೇಕಾಗಿದ್ದ ಗ್ರಾಮಸ್ಥರು ಈಗ ನಿಟ್ಟುಸಿರು ಬಿಟ್ಟಿದ್ದಾರೆ. ಯಾಕೆಂದರೆ ದ್ರೋಣಪಾಲ್ ಮೂಲಕ ಸುಕ್ಮಾವನ್ನು ತಲುಪಲು ಒಂದು ರಸ್ತೆ ನಿರ್ಮಾಣವಾಗಿದ್ದರೆ ಜಗರ್ಗುಂಡ ತಲಪಲು ಇನ್ನೊಂದು ಕಡೆಯಲ್ಲಿ ರಸ್ತೆ ಸಂಪರ್ಕ ಕಲ್ಪಿಸಲಾಗಿದೆ. ಈಗ ಇಲ್ಲಿಗೆ ಮೊದಲ ಬಾರಿಗೆ ಖಾಸಗಿ ಬಸ್ ಸಂಚಾರವೂ ಆರಂಭವಾಗಿದೆ. ಗ್ರಾಮಸ್ಥರು ಆರಾಮವಾಗಿ ಬಸ್ಸಿನಲ್ಲಿ ಸುಕ್ಮಾವನ್ನು ತಲುಪಿಬಿಡಬಹುದು.
ಅಷ್ಟು ಮಾತ್ರವಲ್ಲದೆ ಈ ವಲಯದ ಅನೇಕ ಕುಗ್ರಾಮಗಳನ್ನು ತಲುಪಲು ಜನರಿಗೆ ಅನುಕೂಲವಾಗಿದೆ. ಈಗ ಅದು ದಿನಕ್ಕೊಂದು ಬಾರಿ ಮಾತ್ರ ಈ ಮಾರ್ಗದಲ್ಲಿ ಪ್ರಯಾಣ ಮಾಡುತ್ತದೆ. ಕ್ರಮೇಣ ಅದರ ಸೇವೆ ಹೆಚ್ಚಾಗಲಿದೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಬಸ್ತರ್ ನ ಮಾವೋವಾದಿ ಪ್ರಾಬಲ್ಯವಿರುವ ಭಾಗಗಳಲ್ಲಿ ಸಾಕಷ್ಟು ಮಂದಿ ಗ್ರಾಮಸ್ಥರೊಂದಿಗೆ ಮಾತನಾಡಿದ ಬಳಿಕ ತಿಳಿದ ಸಂಗತಿ ಎಂದರೆ, ಈ ವಲಯದಲ್ಲಿ ಭದ್ರತಾ ವ್ಯವಸ್ಥೆಯಲ್ಲಿ ಅಪಾರ ಪ್ರಮಾಣದಲ್ಲಿ ಬದಲಾವಣೆ ಉಂಟಾಗಿದ್ದರಿಂದ ಜನ ಬಂಡುಕೋರರ ಕಡೆಗೆ ವಾಲುವುದು ತಪ್ಪಿದೆ.
ಎಲ್ಲವೂ ಯೋಜನೆಯಂತೆ ನಡೆದರೆ ಮುಂದಿನ ಮಾರ್ಚ್ ಅಂತ್ಯದ ಹೊತ್ತಿಗೆ ಇಡೀ ಮಾವೋವಾದಿ ದಂಗೆಯನ್ನು ಹತ್ತಿಕ್ಕಲು ಸಾಧ್ಯವಾಗದೇ ಹೋದರೂ ಕನಿಷ್ಠ ಚಳವಳಿಯ ನಿಶಸ್ತ್ರೀಕರಣ ಕೆಲಸವನ್ನು ಜಾರಿಗೆ ತರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭದ್ರತಾ ಪಡೆಗಳು ಹೊಸ ಪ್ರದೇಶಗಳ ಕಡೆಗೆ ಮುನ್ನುಗ್ಗುತ್ತಿವೆ, ಪ್ರತಿ ಐದು ಕಿಲೋಮೀಟರ್ಗಳಿಗೊಂದು ಮುಂಚೂಣಿ ಪೋಸ್ಟ್ ಗಳನ್ನು ಸ್ಥಾಪಿಸುತ್ತಿವೆ ಮತ್ತು ಭದ್ರತೆ ಹಾಗೂ ನಾಗರಿಕ ಆಡಳಿತ ಕೇಂದ್ರಗಳಾಗಿ ಕಾರ್ಯನಿರ್ವಹಿಸುವ ಜಾಲಬಂಧದಂತಹ (web-like grid) ನೆಲೆಗಳನ್ನು ಸೃಷ್ಟಿಸುತ್ತಿರುವುದು ಗಮನಾರ್ಹ ಸಂಗತಿ.
ಈ ಗ್ರಿಡ್ಲಾಕ್ನಿಂದ, ಬಂಡುಕೋರರ ಬಹುತೇಕ ಕಾರಿಡಾರ್ಗಳನ್ನು ಕಡಿದುಹಾಕಿದಂತಾಗಿದೆ. ಈ ಕಾರಿಡಾರ್ಗಳು ಮಾವೋವಾದಿಗಳಿಗೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಮತ್ತು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಮುಕ್ತವಾಗಿ ಚಲಿಸಲು ಸಹಾಯ ಮಾಡುತ್ತಿದ್ದವು.
“ಇಂದು ಸ್ಥಳೀಯ ಪೊಲೀಸರನ್ನು ಹೊರತುಪಡಿಸಿ ನಮ್ಮ ಬಳಿ ಎಪ್ಪತ್ತು ಸಾವಿರ ಸಿಬ್ಬಂದಿ ಇದ್ದಾರೆ. ಅವರೆಲ್ಲರೂ ಕೇಂದ್ರ ಬಸ್ತರ್ ನಲ್ಲಿ ಭಾರತ-ಟಿಬೆಟ್ ಗಡಿ ಪೊಲೀಸ್, ಗಡಿ ಭದ್ರತಾ ಪಡೆ, ಹಾಗೂ ಉತ್ತರ ಬಸ್ತರ್ ನಲ್ಲಿ ಸಶಸ್ತ್ರ ಸೀಮಾ ಬಲ, ದಕ್ಷಿಣ ಬಸ್ತರ್ ನಲ್ಲಿ ಸಿ.ಆರ್.ಪಿ.ಎಫ್. ಸೇರಿದವರಾಗಿದ್ದಾರೆ.” ಎಂದು ಪೊಲೀಸ್ ಮಹಾನಿರ್ದೇಶಕರು ವಿವರಿಸಿದರು.
"ಆಡಳಿತದ ದೃಷ್ಟಿಯಿಂದ, ನಾವು ಸ್ಥಳೀಯರಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸಲು ಈ ಪೋಸ್ಟ್ಗಳ ಸುತ್ತ ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಿದ್ದೇವೆ" ಎಂದು ಪ್ರಸ್ತುತ ಬಸ್ತರ್-ವ್ಯಾಪಿ ಭದ್ರತಾ ಕಾರ್ಯಾಚರಣೆಗಳನ್ನು ಸಂಯೋಜಿಸುವ ಪಟ್ಲಿಂಗಂ ಹೇಳಿದರು. "ಇದು ಸ್ಥಳೀಯ ಗ್ರಾಮಸ್ಥರೊಂದಿಗೆ ವಿಶ್ವಾಸವನ್ನು ಬೆಳೆಸಲು ನಮಗೆ ಸಹಾಯ ಮಾಡುತ್ತಿದೆ" ಎಂದು ಸುಂದರ್ ರಾಜ್ ಪಟ್ಟಿಲಿಂಗಂ ತಿಳಿಸಿದರು.
ಒಂದು ಕಾಲದಲ್ಲಿ ಭೀಕರತೆಗೆ ಹೆಸರಾಗಿದ್ದ ಡೋರ್ನಪಾಲ್-ಜಗರಗುಂಡ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿರುವ ಸೇತುವೆ.
ಬಾಹ್ಯ ಪ್ರಪಂಚದ ಸಂಪರ್ಕ
ಬಾಹ್ಯ ಪ್ರಪಂಚವೇ ಅಪಾಯಕಾರಿ ಎಂದು ಗ್ರಾಮಸ್ಥರಲ್ಲಿ ಬಿಂಬಿಸಿದವರು ಮಾವೋವಾದಿಗಳು. ಹಾಗಾಗಿ ಬಾಹ್ಯ ಪ್ರಪಂಚವನ್ನು ನೋಡಿರದ ಮತ್ತು ಮಾವೋವಾದಿಗಳ ಪ್ರಚಾರದಿಂದ ಪ್ರಭಾವಿತರಾಗಿದ್ದ ಅನೇಕ ಗ್ರಾಮಸ್ಥರು, ಈಗ ಇನ್ನೊಂದು ದೃಷ್ಟಿಕೋನದಿಂದ ಪ್ರಪಂಚವನ್ನು ನೋಡಲು ಸಾಧ್ಯವಾಗಿದೆ. "ಕಲ್ಯಾಣ ಯೋಜನೆಗಳ ಪ್ರಯೋಜನಗಳನ್ನು ಪಡೆಯುವುದರಿಂದ ಅವರಲ್ಲಿ ಸರ್ಕಾರದ ಬಗ್ಗೆ ಇದ್ದ ದೃಷ್ಟಿಕೋನ ಮತ್ತು ನಡವಳಿಕೆಯಲ್ಲಿ ಬದಲಾವಣೆ ತಂದಿದೆ" ಎಂದು ಅವರು ಹೇಳಿದರು.
ಕರೆಗುಟ್ಟ ಮತ್ತು ಅಬುಜಾಮದ್ ಕಾರ್ಯಾಚರಣೆಗಳಲ್ಲಿ ಭದ್ರತಾ ಪಡೆಗಳು ಕ್ರಮವಾಗಿ 31 ಮತ್ತು 28 ಮಾವೋವಾದಿಗಳನ್ನು ಹತ್ಯೆ ಮಾಡಿದ್ದು, ಇದರಲ್ಲಿ 29 ಮಹಿಳಾ ನಕ್ಸಲರು ಸೇರಿದ್ದಾರೆ. ಎಸ್ಎಲ್ಆರ್, ಇನ್ಸಾಸ್ ರೈಫಲ್ಗಳು, 303 ರೈಫಲ್ಗಳು, 12-ಬೋರ್ ರೈಫಲ್ಗಳು, ಬ್ಯಾರೆಲ್ ಗ್ರೆನೇಡ್ ಲಾಂಚರ್ಗಳು ಮತ್ತು ಐಇಡಿಗಳಲ್ಲಿ ಬಳಸುವ ಸ್ಫೋಟಕಗಳು ಸೇರಿದಂತೆ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
2001 ರಿಂದ ಈಚೆಗೆ ಬಸ್ತರ್ನಲ್ಲಿ ಭದ್ರತಾ ಪಡೆಗಳು ಮತ್ತು ಮಾವೋವಾದಿಗಳ ನಡುವೆ 3,300 ಕ್ಕೂ ಹೆಚ್ಚು ನೇರ ಘರ್ಷಣೆಗಳು ನಡೆದಿವೆ. ಇದರಲ್ಲಿ 1,323 ಭದ್ರತಾ ಸಿಬ್ಬಂದಿ ಮತ್ತು 1,503 ಮಾವೋವಾದಿಗಳು ಸಾವನ್ನಪ್ಪಿದ್ದಾರೆ. ಬಸ್ತರ್ ವಲಯದ ಪೊಲೀಸರು ಹಂಚಿಕೊಂಡ ದತ್ತಾಂಶದ ಪ್ರಕಾರ, ಭದ್ರತಾ ಸಿಬ್ಬಂದಿಯ ಸಾವುನೋವುಗಳಲ್ಲಿ ಬಹುಪಾಲು 2001 ಮತ್ತು 2015 ರ ನಡುವೆ ಈ ಪ್ರದೇಶದಲ್ಲಿ ಸಂಭವಿಸಿವೆ, ಆದರೆ ಮಾವೋವಾದಿಗಳು 2015 ರಿಂದ ಹಿನ್ನಡೆ ಅನುಭವಿಸಲು ಪ್ರಾರಂಭಿಸಿದರು. 2016 ಮತ್ತು ಮೇ 2025ರ ನಡುವೆ, 923 ಮಾವೋವಾದಿಗಳು ಹತರಾಗಿದ್ದಾರೆ, ಭದ್ರತಾ ಕಾರ್ಯಾಚರಣೆಗಳು ತೀವ್ರಗೊಂಡ ಕಳೆದ 17 ತಿಂಗಳಲ್ಲಿ ಅವರಲ್ಲಿ 400 ಕ್ಕೂ ಹೆಚ್ಚು ಮಂದಿ ಹತ್ಯೆಗೆ ಒಳಗಾಗಿದ್ದಾರೆ.
ಕಳೆದ 25 ವರ್ಷಗಳ ಅಂಕಿ-ಅಂಶಗಳನ್ನು ಗಮನಿಸಿದರೆ ಸಶಸ್ತ್ರ ಸಂಘರ್ಷ ಅನೇಕ ಏರಿಳಿತಗಳನ್ನು ಕಂಡಿದೆ, ಆದರೆ 2016 ರಿಂದ ಭದ್ರತಾ ಪಡೆಗಳ ವಿಚಾರದಲ್ಲಿ ಈ ಸಂಖ್ಯೆಯಲ್ಲಿ ಗಮನಾರ್ಹ ಸುಧಾರಣೆಯಾಗಿದೆ. ಇನ್ನೊಂದು ಅಂಕಿ-ಅಂಶದ ಪ್ರಕಾರ, 2001ರಿಂದ ಬಸ್ತರ್ ಪ್ರದೇಶದಲ್ಲಿ 7,000ಕ್ಕೂ ಹೆಚ್ಚು ನಾನಾ ಶ್ರೇಣಿಯ ಮಾವೋವಾದಿಗಳು ಶಸ್ತ್ರಾಸ್ತ್ರಗಳನ್ನು ತ್ಯಜಿಸಿದ್ದಾರೆ. ಅವರಲ್ಲಿ ಸುಮಾರು 5,400 ಮಂದಿ 2016 ರಿಂದೀಚೆಗಿನ ಅವಧಿಯಲ್ಲಿ ಶರಣಾಗಿದ್ದಾರೆ. ಇವರಲ್ಲಿ, 2024ರಲ್ಲಿ 800 ಮತ್ತು ಪ್ರಸಕ್ತ ವರ್ಷದಲ್ಲಿ ಮೇ ಅಂತ್ಯದವರೆಗೆ 555 ಮಂದಿ ಶರಣಾಗಿದ್ದಾರೆ.
ಇಂದು, ಬಸ್ತಾರ್ ತನ್ನ ಉದ್ದಗಲಗಳಲ್ಲಿ ಸುಮಾರು 800 ಮೊಬೈಲ್ ಟವರ್ಗಳನ್ನು ಹೊಂದಿದ್ದು, ಮೊಬೈಲ್ ಮತ್ತು ಇಂಟರ್ನೆಟ್ ಸಂಪರ್ಕವನ್ನು ಹೊಂದಿದೆ. ಕೇವಲ 10 ವರ್ಷಗಳ ಹಿಂದೆ, ಈ ವಿಶಾಲವಾದ ಭೂಪ್ರದೇಶಗಳಲ್ಲಿ ಸೆಲ್ ಫೋನ್ಗಳಿಗೆ ನೆಟ್ವರ್ಕ್ ಸಾಕಾಗುತ್ತಿರಲಿಲ್ಲ. ಇದೊಂದು ಗಮನಾರ್ಹ ಬದಲಾವಣೆ.
ಅಕ್ರಮ ಬಂಧನಗಳು ಮತ್ತು ಸುಳ್ಳು ಎನ್ಕೌಂಟರ್ಗಳು
ಪೊಲೀಸರು ಮತ್ತು ದತ್ತಾಂಶಗಳು ತೋರಿಸುವಂತೆ- 2001ರಿಂದ 13,000ಕ್ಕೂ ಹೆಚ್ಚು ನಕ್ಸಲರನ್ನು ಬಂಧಿಸಲಾಗಿದೆ. ಆದರೆ 2016 ರಿಂದ ಸುಮಾರು 6,600 ಮಂದಿಯನ್ನು ಬಂಧಿಸಿದ್ದೇವೆ ಎಂದು ಪೊಲೀಸರು ಹೇಳಿಕೊಳ್ಳುತ್ತಾರೆ. ಬಂಧನಗಳು ಮತ್ತು ಕೆಲವು ಎನ್ಕೌಂಟರ್ಗಳ ಸುತ್ತ ವಿವಾದವು ಹೆಚ್ಚಾಗಿ ಸುತ್ತುವರೆದಿದೆ, ಏಕೆಂದರೆ ಸ್ಥಳೀಯ ನಾಗರಿಕ ಸಮಾಜದ ಕಾರ್ಯಕರ್ತರು ಮತ್ತು ಬುಡಕಟ್ಟು ಮುಖಂಡರು ಬಂಧಿತರಾದ ಅಥವಾ ಕೊಲ್ಲಲ್ಪಟ್ಟವರಲ್ಲಿ ಹಲವರು ನಕ್ಸಲರಲ್ಲ, ಬದಲಿಗೆ ಸಾಮಾನ್ಯ ನಾಗರಿಕರು ಎಂದು ಹೇಳುತ್ತಾರೆ. ಈ ಆರೋಪವನ್ನು ಪೊಲೀಸರು ನಿರಾಕರಿಸುತ್ತಾರೆ.
2012 ರಲ್ಲಿ ಸುಕ್ಮಾ ಜಿಲ್ಲಾಧಿಕಾರಿ ಅಲೆಕ್ಸ್ ಪಾಲ್ ಮೆನನ್ ಅವರ ಅಪಹರಣದ ನಂತರ, ಅವರ ಬಿಡುಗಡೆಗೆ ಪ್ರತಿಯಾಗಿ ನಿಷೇಧಿತ ಸಂಘಟನೆಯ ಬೇಡಿಕೆಯ ಮೇರೆಗೆ ಬಂಧನಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು ರಾಜ್ಯ ಸರ್ಕಾರವು ಆಯೋಗವನ್ನು ರಚಿಸಿತ್ತು. ಆ ಆಯೋಗವು ಅನೇಕ ಬಂಧಿತ ವ್ಯಕ್ತಿಗಳ ವಿರುದ್ಧದ ಪ್ರಕರಣಗಳನ್ನು ಕೈಬಿಡಲು ಶಿಫಾರಸು ಮಾಡಿತ್ತು, ಅವರನ್ನು ಅದು ನಿರಪರಾಧಿ ಎಂದು ಹೇಳಿತ್ತು.
ಇತ್ತೀಚೆಗೆ, ಐದು ಎಡಪಂಥೀಯ ಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಬಸ್ತರ್ನಲ್ಲಿ ನಡೆಯುತ್ತಿರುವ ಕಾನೂನುಬಾಹಿರ ಹತ್ಯೆಗಳನ್ನು ನಿಲ್ಲಿಸುವಂತೆ ಒತ್ತಾಯಿಸಿವೆ.