
ಮದ್ಯದ ಅಮಲಿನಲ್ಲಿ ಶಾಲೆಯ ವಿದ್ಯಾರ್ಥಿನಿಯರ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಘಟನೆ ಬೆಳಕಿಗೆ ಬಂದಿದೆ.
ದೇವನಹಳ್ಳಿಯ ಪ್ರತಿಷ್ಠಿತ ವಸತಿ ಶಾಲೆಯಲ್ಲಿ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ: ದಂಪತಿ ಬಂಧನ
ದೇವನಹಳ್ಳಿಯ ಖಾಸಗಿ ವಸತಿ ಶಾಲೆಯಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ಮಾಲೀಕ ಧನಂಜಯ್ ಮತ್ತು ಆತನ ಪತ್ನಿ ಶೈಲಜಾ ನಡೆಸಿದ ಲೈಂಗಿಕ ದೌರ್ಜನ್ಯ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಪ್ರತಿಷ್ಠಿತ ವಸತಿ ಶಾಲೆಯೊಂದರಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಭೀಕರ ಘಟನೆ ಬೆಳಕಿಗೆ ಬಂದಿದೆ. ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷರೂ ಆಗಿರುವ ಶಾಲೆಯ ಮಾಲೀಕ ಧನಂಜಯ್ ಮತ್ತು ಆತನಿಗೆ ಸಹಕರಿಸಿದ ಪತ್ನಿ ಶೈಲಜಾ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಇಡೀ ಜಿಲ್ಲೆಯನ್ನೇ ಈ ಘಟನೆ ಬೆಚ್ಚಿಬೀಳಿಸಿದೆ.
ದೂರಿನ ಅನ್ವಯ, ಆರೋಪಿ ಧನಂಜಯ್ ಪ್ರತಿ ರಾತ್ರಿ ಮದ್ಯದ ಅಮಲಿನಲ್ಲಿ ಬಾಲಕಿಯರ ಕೊಠಡಿಗೆ ನುಗ್ಗುತ್ತಿದ್ದ ಅಥವಾ ವಾರ್ಡನ್ ಮೂಲಕ ಬಾಲಕಿಯರನ್ನು ತನ್ನ ಕೊಠಡಿಗೆ ಕರೆಸಿಕೊಂಡು ವಿಕೃತಿ ಮೆರೆಯುತ್ತಿದ್ದ ಎಂದು ತಿಳಿದುಬಂದಿದೆ. ವಯಸ್ಸಿನಲ್ಲಿ ತಾತನಂತಿದ್ದ ವ್ಯಕ್ತಿಯ ಈ ಅಸಹ್ಯಕರ ನಡವಳಿಕೆಯಿಂದ ನೊಂದ ಬಾಲಕಿಯರು, ನ್ಯಾಯ ಸಿಗಬಹುದು ಎಂಬ ಆಶಯದೊಂದಿಗೆ ಮಾಲೀಕನ ಪತ್ನಿ ಶೈಲಜಾ ಅವರಿಗೆ ವಿಷಯ ತಿಳಿಸಿದ್ದರು. ಆದರೆ, ಸಂತ್ರಸ್ತರಿಗೆ ಆಸರೆಯಾಗಬೇಕಿದ್ದ ಆಕೆ, ಪತಿಯ ನೀಚ ಕೃತ್ಯಕ್ಕೆ ಸಾಥ್ ನೀಡಿರುವುದಲ್ಲದೆ, ಈ ವಿಷಯ ಹೊರಗೆ ತಿಳಿದರೆ ಪ್ರಾಣ ಬೆದರಿಕೆ ಹಾಕಿದ್ದಾಳೆ ಎನ್ನಲಾಗಿದೆ.
ಎಂಟು ದಿನಗಳ ದಿಗ್ಬಂಧನ
ಘಟನೆಯನ್ನು ಮುಚ್ಚಿಹಾಕಲು ದಂಪತಿ ಕಳೆದ ಎಂಟು ದಿನಗಳಿಂದ ಮಕ್ಕಳನ್ನು ಶಾಲೆಯಲ್ಲೇ ದಿಗ್ಬಂಧನದಲ್ಲಿಟ್ಟಿದ್ದರು. ವಿದ್ಯಾರ್ಥಿನಿಯರು ಹೊರಗೆ ಹೋಗದಂತೆ ಮತ್ತು ಪೋಷಕರಿಗೆ ಫೋನ್ ಮಾಡದಂತೆ ಕಟ್ಟುನಿಟ್ಟಿನ ನಿರ್ಬಂಧ ಹೇರಲಾಗಿತ್ತು. ತನಿಖೆಯ ವೇಳೆ ಆರೋಪಿಗಳು ಕೆಲವು ಆಘಾತಕಾರಿ ಮಾಹಿತಿಗಳನ್ನು ಒಪ್ಪಿಕೊಂಡಿದ್ದು, ಈತನ ಕುಕೃತ್ಯದಿಂದ ನೊಂದ ಬಾಲಕಿಯರಿಗೆ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಆತನ ಹೆಂಡತಿ ಪಪ್ಪಾಯ ತಿನ್ನಿಸಿದ್ದಳು ಎಂಬ ಅಂಶವೂ ಬೆಳಕಿಗೆ ಬಂದಿದೆ. ಫೆಬ್ರವರಿ 27ರಂದು ಸಂತ್ರಸ್ತ ಬಾಲಕಿಯರು ಹೇಗೋ ಪೋಷಕರಿಗೆ ಕರೆ ಮಾಡಿ ತಾವು ಅನುಭವಿಸುತ್ತಿರುವ ನರಕಯಾತನೆಯನ್ನು ವಿವರಿಸಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೋಷಕರು ಶಾಲೆಗೆ ಮುತ್ತಿಗೆ ಹಾಕಿ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪೊಲೀಸ್ ತನಿಖೆ ಚುರುಕು
ದೂರು ದಾಖಲಾಗುತ್ತಿದ್ದಂತೆಯೇ ಪೊಲೀಸರು ಆರೋಪಿ ದಂಪತಿಯನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ. ಸಂತ್ರಸ್ತ ಬಾಲಕಿಯರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಸುಮಾರು 700ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಈ ಶಾಲೆಯಲ್ಲಿ ಬೇರೆ ಮಕ್ಕಳಿಗೂ ಇಂತಹ ಕಿರುಕುಳ ನೀಡಲಾಗಿದೆಯೇ ಎಂಬ ಬಗ್ಗೆ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಆನೇಕಲ್ನಲ್ಲೂ ಇಂತಹುದೇ ಪ್ರಕರಣ:
ಇತ್ತೀಚೆಗಷ್ಟೇ ಬೆಂಗಳೂರಿನ ಆನೇಕಲ್ನಲ್ಲಿ ಚಾಕೊಲೇಟ್ ಆಮಿಷ ಒಡ್ಡಿ ಒಂಬತ್ತಕ್ಕೂ ಹೆಚ್ಚು ಶಾಲಾ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಕೃಷ್ಣಮೂರ್ತಿ ಅಲಿಯಾಸ್ ಕಿಟ್ಟಿ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಶಾಲಾ ಆವರಣ ಹಾಗೂ ಶೌಚಾಲಯದ ಬಳಿ ಮಕ್ಕಳನ್ನು ಏಕಾಂತಕ್ಕೆ ಕರೆದೊಯ್ದು ಈತ ಅಸಭ್ಯವಾಗಿ ವರ್ತಿಸುತ್ತಿದ್ದ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಸಾಲು ಸಾಲು ಇಂತಹ ಘಟನೆಗಳು ಮಕ್ಕಳ ಸುರಕ್ಷತೆಯ ಬಗ್ಗೆ ಪೋಷಕರಲ್ಲಿ ಆತಂಕ ಮೂಡಿಸಿವೆ.

