ಷೇರುಪೇಟೆಯಿಂದ ಬಂಡವಾಳ ಹಿಂಪಡೆದ ವಿದೇಶಿ ಹೂಡಿಕೆದಾರರು: ಮಾರ್ಚ್‌ನಲ್ಲಿ 88,180 ಕೋಟಿ ರೂ. ಹೊರಕ್ಕೆ
x

ಷೇರುಪೇಟೆಯಿಂದ ಬಂಡವಾಳ ಹಿಂಪಡೆದ ವಿದೇಶಿ ಹೂಡಿಕೆದಾರರು: ಮಾರ್ಚ್‌ನಲ್ಲಿ 88,180 ಕೋಟಿ ರೂ. ಹೊರಕ್ಕೆ

ಮಾರ್ಚ್ ತಿಂಗಳಿನ ಕೇವಲ 20 ದಿನಗಳಲ್ಲಿ ಬರೋಬ್ಬರಿ 88,180 ಕೋಟಿ ರೂಪಾಯಿ (ಅಂದಾಜು 9.6 ಬಿಲಿಯನ್ ಡಾಲರ್) ಬಂಡವಾಳವನ್ನು ಹೊರತೆಗೆಯಲಾಗಿದೆ.


Click the Play button to hear this message in audio format

ಪಶ್ಚಿಮ ಏಷ್ಯಾದಲ್ಲಿ ಉಲ್ಬಣಿಸುತ್ತಿರುವ ಯುದ್ಧದ ಬಿಕ್ಕಟ್ಟು, ಕಚ್ಚಾ ತೈಲ ಬೆಲೆ ಏರಿಕೆ ಹಾಗೂ ಕುಸಿಯುತ್ತಿರುವ ರೂಪಾಯಿ ಮೌಲ್ಯದಿಂದ ಕಂಗೆಟ್ಟಿರುವ ವಿದೇಶಿ ಪೋರ್ಟ್‌ಫೋಲಿಯೊ ಹೂಡಿಕೆದಾರರು (ಎಫ್‌ಪಿಐ), ಭಾರತೀಯ ಷೇರುಪೇಟೆಯಿಂದ ಭಾರಿ ಪ್ರಮಾಣದ ಬಂಡವಾಳವನ್ನು ಹಿಂಪಡೆಯುತ್ತಿದ್ದಾರೆ.

ಮಾರ್ಚ್ ತಿಂಗಳಿನ ಕೇವಲ 20 ದಿನಗಳಲ್ಲಿ ಬರೋಬ್ಬರಿ 88,180 ಕೋಟಿ ರೂಪಾಯಿ (ಅಂದಾಜು 9.6 ಬಿಲಿಯನ್ ಡಾಲರ್) ಬಂಡವಾಳವನ್ನು ಹೊರತೆಗೆಯಲಾಗಿದ್ದು, ಇದು ದೇಶದ ಆರ್ಥಿಕ ಬೆಳವಣಿಗೆ ಮತ್ತು ಕಾರ್ಪೊರೇಟ್ ಗಳಿಕೆಯ ಮೇಲೆ ತೀವ್ರ ಪರಿಣಾಮ ಬೀರುವ ಆತಂಕ ಸೃಷ್ಟಿಸಿದೆ. ಈ ಬೆಳವಣಿಗೆಯೊಂದಿಗೆ, 2026ನೇ ವರ್ಷದಲ್ಲಿ ಈವರೆಗಿನ ಒಟ್ಟು ಎಫ್‌ಪಿಐ ಬಂಡವಾಳ ನಿರ್ಗಮನದ (ಔಟ್‌ಫ್ಲೋ) ಪ್ರಮಾಣ 1 ಲಕ್ಷ ಕೋಟಿ ರೂಪಾಯಿಗಳ ಗಡಿಯನ್ನು ದಾಟಿದೆ.

ಬಂಡವಾಳ ನಿರ್ಗಮನಕ್ಕೆ ಪ್ರಮುಖ ಕಾರಣಗಳು

ಫೆಬ್ರವರಿ ತಿಂಗಳಲ್ಲಿ ವಿದೇಶಿ ಹೂಡಿಕೆದಾರರು 22,615 ಕೋಟಿ ರೂ. ಹೂಡಿಕೆ ಮಾಡುವ ಮೂಲಕ ಕಳೆದ 17 ತಿಂಗಳಲ್ಲೇ ಅತಿ ಹೆಚ್ಚು ಬಂಡವಾಳ ಹರಿದುಬಂದಿತ್ತು. ಆದರೆ ಮಾರ್ಚ್‌ ತಿಂಗಳಲ್ಲಿ ಪ್ರತಿದಿನವೂ ಹೂಡಿಕೆದಾರರು ನಿರಂತರವಾಗಿ ಬಂಡವಾಳ ಹಿಂಪಡೆಯುತ್ತಲೇ ಇದ್ದಾರೆ. ಏಂಜಲ್ ಒನ್‌ನ ಹಿರಿಯ ವಿಶ್ಲೇಷಕ ವಕಾರ್‌ಜಾವೇದ್ ಖಾನ್ ಅವರ ಪ್ರಕಾರ, ಮಧ್ಯಪ್ರಾಚ್ಯದ ಬಿಕ್ಕಟ್ಟು ಇದಕ್ಕೆ ಪ್ರಮುಖ ಕಾರಣವಾಗಿದೆ. ಹಾರ್ಮುಜ್ ಜಲಸಂಧಿಯ ಕಾರ್ಯಾಚರಣೆ ವ್ಯತ್ಯಯಗೊಂಡು ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 100 ಡಾಲರ್ ಗಡಿ ದಾಟಿರುವುದು ಹಾಗೂ ಅಮೆರಿಕನ್ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ 92 ರೂ. ಸನಿಹದಲ್ಲಿರುವುದು ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ. ಇದು ಅಕ್ಟೋಬರ್ 2024ರಲ್ಲಿ ದಾಖಲಾಗಿದ್ದ 94,017 ಕೋಟಿ ರೂ. ನಿರ್ಗಮನದ ನಂತರದ ಅತಿ ದೊಡ್ಡ ಹಿಂಪಡೆಯುವಿಕೆಯಾಗಿದೆ.

ಆರ್ಥಿಕ ವಲಯದ ಮೇಲೆ ಭಾರಿ ಹೊಡೆತ

ಭಾರತೀಯ ಮಾರುಕಟ್ಟೆಯಿಂದ ಬಂಡವಾಳ ಹಿಂಪಡೆಯುತ್ತಿರುವ ವಿದೇಶಿ ಹೂಡಿಕೆದಾರರು, ಅಮೆರಿಕದ ಟ್ರೆಷರಿ ಬಾಂಡ್‌ಗಳತ್ತ ಆಕರ್ಷಿತರಾಗುತ್ತಿದ್ದಾರೆ. ಜಾಗತಿಕ ಮಾರುಕಟ್ಟೆಯ ನಗದು ಕೊರತೆ ಮತ್ತು ಬಲಿಷ್ಠ ಡಾಲರ್ ಮೌಲ್ಯವು ಹೂಡಿಕೆದಾರರು ಉದಯೋನ್ಮುಖ ಮಾರುಕಟ್ಟೆಗಳಿಂದ (ಭಾರತದಂತಹ) ಬಂಡವಾಳವನ್ನು ಅಮೆರಿಕದತ್ತ ಸ್ಥಳಾಂತರಿಸಲು ಪ್ರೇರೇಪಿಸುತ್ತಿದೆ ಎಂದು ಮಾರ್ನಿಂಗ್‌ಸ್ಟಾರ್ ಇನ್ವೆಸ್ಟ್‌ಮೆಂಟ್‌ನ ಹಿಮಾಂಶು ಶ್ರೀವಾಸ್ತವ ವಿಶ್ಲೇಷಿಸಿದ್ದಾರೆ. ವಲಯವಾರು ಲೆಕ್ಕಾಚಾರದಲ್ಲಿ, ಹಣಕಾಸು ಸೇವೆಗಳ ವಲಯವು ಅತಿ ಹೆಚ್ಚು ಹೊಡೆತ ತಿಂದಿದ್ದು, ಮಾರ್ಚ್ 15ಕ್ಕೆ ಅಂತ್ಯಗೊಂಡ ಹದಿನೈದು ದಿನಗಳಲ್ಲಿ ಈ ವಲಯದಿಂದಲೇ 31,831 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಲಾಗಿದೆ.

ಮುಂದಿನ ದಿನಗಳ ಮಾರುಕಟ್ಟೆ ಮುನ್ಸೂಚನೆ

ಮುಂದಿನ ದಿನಗಳಲ್ಲಿಯೂ ಷೇರುಪೇಟೆಯ ಬಗ್ಗೆ ಎಚ್ಚರಿಕೆಯ ಹೆಜ್ಜೆ ಇಡುವುದು ಅನಿವಾರ್ಯ ಎಂದು ಮಾರುಕಟ್ಟೆ ತಜ್ಞರು ಎಚ್ಚರಿಸಿದ್ದಾರೆ. ಕಚ್ಚಾ ತೈಲ ಬೆಲೆಯಲ್ಲಿನ ಏರಿಳಿತಗಳು ಹಾಗೂ ಭೌಗೋಳಿಕ-ರಾಜಕೀಯ ಉದ್ವಿಗ್ನತೆ ಮುಂದುವರಿದರೆ ಬಂಡವಾಳ ಹೊರಹರಿವು ಕೂಡ ಇದೇ ರೀತಿ ಮುಂದುವರಿಯಲಿದೆ. ಆದರೆ, ಯುದ್ಧದ ಪರಿಸ್ಥಿತಿ ಶಮನಗೊಂಡು, ದೇಶೀಯ ಸಾಂಸ್ಥಿಕ ಹೂಡಿಕೆದಾರರು (ಡಿಐಐ) ಬಲವಾದ ಬೆಂಬಲ ನೀಡಿದರೆ ಮಾರುಕಟ್ಟೆ ಮತ್ತೆ ಸ್ಥಿರತೆ ಕಾಯ್ದುಕೊಳ್ಳುವ ಸಾಧ್ಯತೆಯಿದೆ ಎಂದು ಜಿಯೋಜಿತ್ ಇನ್ವೆಸ್ಟ್‌ಮೆಂಟ್ಸ್‌ನ ಮುಖ್ಯ ಹೂಡಿಕೆ ತಂತ್ರಜ್ಞ ವಿ.ಕೆ. ವಿಜಯಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

Read More
Next Story